ಜೈಪುರ(ರಾಜಸ್ಥಾನ) : ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಅನುಷ್ಠಾನ, ಎಲ್ಲರಿಗೆ 15 ಲಕ್ಷ ವಿಮೆ ರಕ್ಷಣೆ ಸೇರಿ ಕಾಂಗ್ರೆಸ್ನ 7 ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದರು.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಯೋಗೇಶ್ ಕಡಿಯನ್ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿದ ಇಂಟರ್ಪೋಲ್
ರಾಜಸ್ಥಾನ ವಿಧಾನಸಭೆಯ ಎಲ್ಲ 200 ಸ್ಥಾನಗಳಿಗೆ ನ.25 ರಂದು ಮತದಾನ ನಡೆಯಲಿದ್ದು, ಡಿ.3 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ಅವರು ಜೈಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಮ್ಮ ಸರ್ಕಾರವು ಮರು ಆಯ್ಕೆಯಾದರೆ ಪ್ರಸ್ತಾಪಿಸಿದ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರವು ಪ್ರತಿ ಕಿಲೋಗ್ರಾಂಗೆ 2 ರೂ.ನಂತೆ ಹಸುವಿನ ಸಗಣಿ ಖರೀದಿಸುತ್ತದೆ. ತಮ್ಮ ಸರ್ಕಾರವು 1 ಕೋಟಿ ಮಹಿಳೆಯರಿಗೆ ಮೂರು ವರ್ಷಗಳವರೆಗೆ ಉಚಿತ ಇಂಟರ್ನೆಟ್ ಸೇವೆಯೊಂದಿಗೆ ಸ್ಮಾರ್ಟ್ಫೋನ್ಗಳನ್ನು ನೀಡುತ್ತದೆ. ಪ್ರತಿ ವಿದ್ಯಾರ್ಥಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡಲಾಗುವುದು ಎಂದು ಘೋಷಿಸಿದರು.
ಏಳು ಗ್ಯಾರಂಟಿಗಳಲ್ಲಿ 1.05 ಕೋಟಿ ಕುಟುಂಬಗಳಿಗೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್, ಕುಟುಂಬದ ಮಹಿಳೆಗೆ ವಾರ್ಷಿಕ 10,000ರೂ. ಗೌರವಧನ ಒಳಗೊಂಡಿದೆ. ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯನ್ನು ಸರಿಯಾದ ಸಮಯದಲ್ಲಿ ಈಡೇರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.