More

    ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ಪೂರೈಕೆಗೆ ಆಗ್ರಹ

    ಸಕಲೇಶಪುರ: ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವಂತೆ ಮುಂದಿನ ಲೋಕಸಭೆ ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

    ತಾಲೂಕಿನ ವಳಲಹಳ್ಳಿ ಗ್ರಾಪಂ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಕಾಫಿ ಬೆಳೆಗಾರರು ಐಪಿ ಸೆಟ್‌ಗಾಗಿ ವಿದ್ಯುತ್ ಉಪಯೋಗಿಸಲಿ ಬಿಡಲಿ ಪ್ರತಿ ತಿಂಗಳು 13 ಸಾವಿರ ರೂ. ಬಿಲ್ ಕಟ್ಟಬೇಕು. ವರ್ಷಕ್ಕೆ 1.56 ಲಕ್ಷ ರೂ. ಕಟ್ಟಬೇಕಿದೆ. ಇದು ಅನ್ಯಾಯವಲ್ಲವೇ?, ಅಡಕೆ ಬೆಳೆಗಾರರಿಗೆ ಪುಕ್ಕಟೆ ವಿದ್ಯುತ್ ನೀಡುವ ಸರ್ಕಾರ ಕಾಫಿ ಬೆಳೆಗಾರರಿಗೆ ಏಕೆ ಇಲ್ಲ? ಇದು ತೀರಾ ಅನ್ಯಾಯ. ಜನವರಿ-ಫೆಬ್ರವರಿ ತಿಂಗಳಿನಲ್ಲಿ ಮಾತ್ರ ಐಪಿ ಸೆಟ್ ಉಪಯೋಗಿಸಲಾಗುತ್ತಿದೆ. ಆದರೆ, ವರ್ಷಪೂರ್ತಿ ವಿದ್ಯುತ್ ಬಿಲ್ ಕಟ್ಟಬೇಕಿದೆ. ರಾಜ್ಯ ಸರ್ಕಾರದ ಈ ಮಲತಾಯಿ ಧೋರಣೆ ತಪ್ಪಬೇಕಿದೆ ಎಂದು ಒತ್ತಾಯಿಸಿದರು.

    ಇತರೆ ಯಾವುದೇ ಬೆಳೆಗಳಿಗೂ ತೊಂದರೆಯಾದರೆ ತಕ್ಷಣ ಸ್ಪಂದಿಸುವ ಸರ್ಕಾರ ಕಾಫಿ ಬೆಳೆಗಾರರ ಬಗ್ಗೆ ಅಸಡ್ಡೆ ಭಾವನೆ ಹೊಂದಿದೆ. ಕಾಫಿ ಬೆಳೆಗಾರರು ಸರ್ಕಾರಕ್ಕೆ 13 ಸಾವಿರ ಕೋಟಿ ರೂ. ಆದಾಯ ತಂದುಕೊಡುತ್ತಿದ್ದಾರೆ. ಆದರೂ, ಸರ್ಕಾರಕ್ಕೆ ಕಾಫಿ ಬೆಳೆಗಾರರ ಬಗ್ಗೆ ಕಾಳಜಿ ಇಲ್ಲ. ಕಾಫಿ ಬೆಳೆಗಾರರಿಗೆ ಯಾವುದೇ ಉಪಯೋಗವಿಲ್ಲದ ಕಾಫಿ ಮಂಡಳಿಯನ್ನು ವಿಸರ್ಜಿಸುವ ಅಗತ್ಯವಿದೆ. ಕಾಫಿ ಬೆಳೆಗಾರರ ಈ ಸಮಸ್ಯೆಯನ್ನು ಲೋಕಸಭೆಯಲ್ಲಿ ಅನಾವರಣ ಮಾಡಲಾಗುವುದು ಎಂದು ಸಂಸದರು ತಿಳಿಸಿದರು.

    ರಸ್ತೆಗೆ ಹಣವಿಲ್ಲ: ಸಂಸದರ ಅನುದಾನದಲ್ಲಿ ರಸ್ತೆಗೆ ಹಣ ನೀಡುವಂತೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಅವರು, ಲೋಕಸಭಾ ವ್ಯಾಪ್ತಿಗೆ 10 ತಾಲೂಕುಗಳು ಬರುತ್ತಿದ್ದು, ಪ್ರತಿ ತಾಲೂಕಿಗೆ ಸಂಸದರ ಅನುದಾನವಾಗಿ 50 ಲಕ್ಷ ರೂ. ಹಂಚಲು ಮಾತ್ರ ಸಾದ್ಯ. ಆದರೆ, ಒಂದು ಕಿ.ಮೀ ರಸ್ತೆ ಮಾಡಲು 1.5 ಕೋಟಿ ಅಗತ್ಯವಿದೆ. ಆದ್ದರಿಂದ, ಸಂಸದರ ಅನುದಾನದಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ. ಬದಲಿ ಅನುದಾನದಲ್ಲಿ ರಸ್ತೆ ಮಾಡೋಣ ಎಂದು ಹೇಳಿದರು.

    ಎತ್ತಿನಹೊಳೆ ಯೋಜನೆಯಿಂದ ಹೆಚ್ಚುಲಾಭ: ತಾಲೂಕಿನಿಂದ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆಯಿಂದ ಹೆಚ್ಚು ಲಾಭವಾಗಿರುವುದು ಸಕಲೇಶಪುರ ತಾಲೂಕಿಗೆ. ಹೆತ್ತೂರು ಹೋಬಳಿಯ ಹಲವು ಗ್ರಾಮಗಳು ಸೀಮೆಂಟ್ ರಸ್ತೆ ಕಾಣಲು ಎತ್ತಿನಹೊಳೆ ಯೋಜನೆ ಸಹಾಯಕವಾಗಿದೆ. ಆದರೂ, ಕೆಲವು ರಸ್ತೆಗಳು ಇನ್ನೂ ಬಾಕಿ ಉಳಿದಿವೆ. ಮುಂದಿನ ದಿನಗಳಲ್ಲಿ ಈ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಆದರೆ ಈ ವೇಳೆ ಎತ್ತಿನಹೊಳೆ ಮೂಲದಲ್ಲೆ ಅಭಿವೃದ್ಧಿ ಕಾಮಗಾರಿಗಳಾಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು.

    ಮೊಬೈಲ್ ಟವರ್: ಚಿನ್ನಹಳ್ಳಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಟವರ್ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಇದರಿಂದಾಗಿ ಬಿಎಸ್‌ಎನ್‌ಎಲ್ ಗ್ರಾಹಕರ ಇಲ್ಲದಂತಾಗಿದ್ದಾರೆ. ಆದ್ದರಿಂದ ಮೊದಲಿಗೆ ಸ್ಥಗಿತಗೊಂಡಿರುವ ಮೊಬೈಲ್ ಟವರ್ ದುರಸ್ಥಿಪಡಿಸುವಂತೆ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು. ಮದ್ಯಪ್ರವೇಶಿಸಿ ಮಾತನಾಡಿದ ಸಂಸದರು, ಪಶ್ಚಿಮಘಟ್ಟವನ್ನು ಬಹುಭಾಗ ಹೊಂದಿರುವ ಸಕಲೇಶಪುರ ತಾಲೂಕನ್ನು ಗುಡ್ಡಗಾಡು ಪ್ರದೇಶ ಎಂದು ಪರಿಗಣಿಸಿ ಹೊಸದಾಗಿ 11, 5ಜಿ ಟವರ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಅನುದಾನವಿಲ್ಲ: ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಇದರಿಂದಾಗಿ ಅಭಿವೃದ್ಧಿ ನಿಂತ ನೀರಿನಂತಾಗಿದೆ. ಎಷ್ಟು ಇಲಾಖೆಗಳಲ್ಲಿ ಅಧಿಕಾರಿಗಳಿಗೆ ಸಂಬಳ ನೀಡಲು ಹಣವಿಲ್ಲ ಪ್ರಶ್ನಿಸಿದರೆ ಗ್ಯಾರಂಟಿ ಎನ್ನುತ್ತಾರೆ. ನಮ್ಮ ಸರ್ಕಾರದ 1. 3 ತಿಂಗಳ ಅವಧಿಯಲ್ಲಿ 16 ಸಾವಿರ ಕೋಟಿ ರೂ. ಅನುದಾನ ತರಲಾಗಿತ್ತು ಎಂದರು.

    ಕ್ರಮಕ್ಕೆ ಆಗ್ರಹ: ಸರ್ಕಾರದ ಆದೇಶ ಮುಂದಿಟ್ಟು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಯಸಳೂರು ವಲಯ ಅರಣ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಈ ಅಧಿಕಾರಿ ಹಣ ಸ್ವೀಕರಿಸಿರುವ ಆಡಿಯೋ ವೈರಲ್ ಆಗಿದ್ದರೂ ಇದುವರಗೆ ಕ್ರಮ ಕೈಗೊಂಡಿಲ್ಲ ಎಂಬ ಸಭೆಯಲ್ಲಿ ಆರೋಪ ಕೇಳಿಬಂತು.

    ಇದೇ ಮೊದಲು: ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ 357 ಪಂಚಾಯಿತಿಗಳಿದ್ದು 4980 ಹಳ್ಳಿಗಳನ್ನು ಒಳಪಟ್ಟಿದೆ. ಈಗಾಗಲೇ ಲೋಕಸಭಾ ಕ್ಷೇತ್ರದ 250ಕ್ಕೂ ಅಧಿಕ ಗ್ರಾಪಂಗಳ ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಲಾಗಿದೆ. ಇನ್ನುಳಿದ ಗ್ರಾಪಂ ಮಟ್ಟದ ಸಭೆಯನ್ನು ಇನ್ನೂ 6 ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು. ಸಂಸದರೊಬ್ಬರು ಎಲ್ಲ ಗ್ರಾಪಂಗಳ ಮಟ್ಟದಲ್ಲಿ ಸಭೆ ನಡೆಸಿರುವುದು ಇದೆ ಮೊದಲು ಎನ್ನಲಾಗಿದೆ.

    ಕ್ಷೇಮೆ ಕೇಳಿದ ಸಂಸದರು: ವಳಲಹಳ್ಳಿ ಗ್ರಾಪಂ ಮಟ್ಟದ ಕುಂದುಕೊರತೆ ಸಭೆಯನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿತ್ತು. ಆದರೆ, ಮಧ್ಯಾಹ್ನ 2 ಗಂಟೆಗೆ ಆಗಮಿಸಿದ ಸಂಸದರು ಸಭೆ ಆರಂಭದಲ್ಲಿ ತಡವಾಗಿ ಆಗಮಿಸಿದ್ದಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಕ್ಷಮೆ ಕೋರಿದರು.
    ಸಭೆಯಲ್ಲಿ ವಳಲಹಳ್ಳಿ ಗ್ರಾಪಂ ಅಧ್ಯಕ್ಷೆ ಶೀಲಾಮಹೇಶ್, ತಾಪಂ ಇಒ ರಾಮಚಂದ್ರ, ಬಿಇಒ ಪುಷ್ಪಲತಾ, ಸಹಾಯಕ ನಿರ್ದೇಶಕ ಹರೀಶ್ ಮತ್ತಿತರರಿದ್ದರು.

    ಸಭೆಯಲ್ಲಿ ಕುಡುಕನ ಕಿರಿಕ್ : ಐಗೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಕುಂದುಕೊರತೆ ಸಭೆ ಆರಂಭದಲ್ಲೇ ಎದ್ದುನಿಂತ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬರು, ರಸ್ತೆ ವಿಚಾರ ಎತ್ತಿ ಅಸಂಬಂದ್ಧವಾಗಿ ಮಾತನಾಡಲು ಆರಂಭಿಸಿದ್ದರು. ಇವರನ್ನು ಸಮಧಾನಪಡಿಸಲು ಗ್ರಾಮಸ್ಥರು ಪ್ರಯತ್ನ ನಡೆಸಿದ ವೇಳೆ ಸಂಸದರನ್ನು ಏಕವಚನದಲ್ಲಿ ನಿಂದಿಸಲಾರಂಬಿಸಿದ ವ್ಯಕ್ತಿ. ಇದರಿಂದ ಸಿಟ್ಟಿಗೆದ್ದ ಸಂಸದರು ನಿನ್ನಿಂದ ನಾನ್ಯಾಕೆ ನಿಂದಿಸಿಕೊಳ್ಳಬೇಕು, ಹೋಗ್ರಿ ಅವನ ವಿರುದ್ಧ ಸಭೆಗೆ ಅಡ್ಡಿಪಡಿಸಿದ ದೂರು ದಾಖಲಿಸಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿದರು. ಇದರಿಂದ ವಿಚಲಿತಗೊಂಡ ಮದ್ಯ ಸೇವಿಸಿದ್ದ ವ್ಯಕ್ತಿ ಕ್ಷಮೆ ಕೇಳಿದ. ನಂತರ ಆತನನ್ನು ವೇದಿಕೆ ಮುಂಭಾಗ ಕುಳ್ಳಿರಿಸಿ ಹೇಗೆ ಮಾತನಾಡ ಬೇಕು, ಯಾವ ರೀತಿ ಮಾತನಾಡಬೇಕು ಎಂದು ಪಾಠ ಮಾಡಿದರು. ಆದರೂ ಸಮಧಾನಗೊಳ್ಳದ ವ್ಯಕ್ತಿ ಮಾತು ಮುಂದುವರಿಸಿದ್ದ ಇದರಿಂದ ಗ್ರಾಮಸ್ಥರು ಆತನನ್ನು ಸಭೆಯಿಂದ ಹೊರಕಳುಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts