ಬೆಂಗಳೂರು: ನಗರದಲ್ಲಿ ಮತದಾನ ಉತ್ತೇಜಿಸುವ ಸಲುವಾಗಿ ನಗರದ ನೃಪತುಂಗ ರಸ್ತೆಯಲ್ಲಿನ ಭಾರತೀಯ ರಿಸರ್ವ್ ಬ್ಯಾಂಕ್ ಬಳಿಯ ನಿಸರ್ಗ ಗ್ರ್ಯಾಂಡ್ ಹೋಟೆಲ್ನಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತ ಉಪಹಾರ ನೀಡಲಾಯಿತು.
ಈ ಕುರಿತು ಹೋಟೆಲ್ ಮೊದಲೇ ಘೋಷಣೆ ಮಾಡಿದ್ದರಿಂದ ಶುಕ್ರವಾರ ಬೆಳಗ್ಗೆಯಿಂದಲೇ ಹೋಟೆಲ್ ಎದುರು ನೂರಾರು ಮಂದಿ ಜಮಾಯಿಸಿದ್ದರು. ಮತದಾನ ಮಾಡಿದ್ದಕ್ಕೆ ಬೆರಳಿನ ಶಾಯಿ ಗುರುತು ತೋರಿಸಿ ಉಚಿತವಾಗಿ ತಿಂಡಿ ಸವಿದರು.
ಉಚಿತವಾಗಿ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ತಂಪು ಪಾನಕವನ್ನು ನೀಡಲಾಯಿತು. ಸಾಮಾಜಿಕ ಕಳಕಳಿಯಿಂದ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಕೊಡುಗೆ ನೀಡಿದ್ದಾಗಿ ಹೋಟೆಲ್ ಮಾಲೀಕ ಎಸ್.ಪಿ. ಕೃಷ್ಣರಾಜು ತಿಳಿಸಿದ್ದಾರೆ.