More

    ಸಿಎಸ್‌ಆರ್ ದೇಣಿಗೆ ನೆಪದಲ್ಲಿ ಚಾರಿಟಬಲ್ ಟ್ರಸ್ಟ್‌ಗಳಿಗೆ ವಂಚನೆ

    ಬೆಂಗಳೂರು: ಚಾರಿಟಬಲ್ ಟ್ರಸ್ಟ್‌ಗಳಿಗೆ ಕೋಟ್ಯಂತರ ರೂಪಾಯಿ ‘ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ’ (ಸಿಎಸ್‌ಆರ್) ದೇಣಿಗೆ ಕೊಡಿಸುವ ನೆಪದಲ್ಲಿ ವಂಚಿಸುತ್ತಿದ್ದ ನಾಲ್ವರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನ ಕಾಂಚೀಪುರಂ ಪಳ್ಳಿ ಕರಣೈ ನಿವಾಸಿ ಸುನಿತಾ (36), ಜಯಕುಮಾರ್ (42), ಉತ್ತರಹಳ್ಳಿಯ ಜತೀನ್ ಅಗರ್ವಾಲ್ (20) ಮತ್ತು ಗುಜರಾತ್ ಮೂಲದ ರಾಜೇಂದ್ರ ಹೆಗ್ಡೆ (56) ಬಂಧಿತರು. ಆರೋಪಿಗಳಿಂದ ನಕಲಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

    ಜೆಎಸ್‌ಡಬ್ಲುೃ ಸ್ಟೀಲ್ ಲಿಮಿಟೆಡ್, ಆದಿತ್ಯ ಬಿರ್ಲಾ, ಅಲ್ಟ್ರಾ ಟೆಕ್, ಮಹೀಂದ್ರ ಪ್ರೈ.ಲಿ. ಸೇರಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಇದರ ಪ್ರಕಾರ ಆರೋಪಿಗಳೇ ಎಕ್ಸಿಕ್ಯೂಟಿವ್ ಮ್ಯಾನೇಜರ್, ಕಂಪನಿಯ ಪ್ರತಿನಿಧಿಗಳು ಎಂದು ಬಿಂಬಿಸಿಕೊಂಡು ಚಾರಿಟಬಲ್ ಟ್ರಸ್ಟ್‌ಗಳ ಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದರು.

    ನಕಲಿ ದಾಖಲೆಗಳನ್ನು ತೋರಿಸಿ ಕಲಂ 80(ಜಿ) ಆದಾಯ ತೆರಿಗೆ ಕಾಯ್ದೆಯ ಅನ್ವಯ ನಿಮ್ಮ ಟ್ರಸ್ಟ್‌ಗಳಿಗೆ ದೇಣಿಗೆ ನೀಡುತ್ತೇವೆ. ಇದರಿಂದ ಕಂಪನಿಗೆ ಆದಾಯ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗಲಿದೆ ಎಂದು ನಂಬಿಸುತ್ತಿದ್ದರು. ಸಿಎಸ್‌ಆರ್ ದೇಣಿಗೆ ನೀಡಲು ಮೂವ್‌ಮೆಂಟ್ ಚಾರ್ಜ್ ಮತ್ತು ಪ್ರೊಸೆಸಿಂಗ್ ಚಾರ್ಜ್ ಕೊಡಬೇಕಾಗುತ್ತದೆ ಎಂದು ಹೇಳಿ 10ರಿಂದ 15 ಲಕ್ಷ ರೂ. ಮತ್ತು ದಾಖಲೆಪತ್ರಗಳನ್ನು ಪಡೆಯುತ್ತಿದ್ದರು.

    ಆನಂತರ ಟ್ರಸ್ಟ್ ಕಡೆಯಿಂದ ಸರಿಯಾದ ದಾಖಲೆ ಮತ್ತು ನಿಯಮ ಪಾಲನೆ ಮಾಡಿಲ್ಲ ಎಂದು ನೆಪ ಹೇಳಿ ಹಣ ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿರಸ್ಕರಿಸುತ್ತಿದ್ದರು. ಇದೆ ರೀತಿ ಮಾ.14ರಂದು ಶಂಕರಾನಂದ ಆಶ್ರಮ ಟ್ರಸ್ಟ್ ಪದಾಧಿಕಾರಿಗಳನ್ನು ಸಂಪರ್ಕಿಸಿದ ಆರೋಪಿಗಳು, ಎಕ್ಸ್‌ಪೆಂಡರ್ಸ್ ಇಂಟರ್‌ನ್ಯಾಷನಲ್ ಇಂಡಿಯಾ ಪ್ರೈ.ಲಿ. ಕಂಪನಿಯಿಂದ ಕೋಟ್ಯಂತರ ರೂ. ಸಿಎಸ್‌ಆರ್ ಂಡ್ ನೀಡುವುದಾಗಿ ನಂಬಿಸಿದ್ದರು.

    ಟ್ರಸ್ಟ್ ಕಡೆಯಿಂದ 15 ಲಕ್ಷ ರೂ. ಮತ್ತು ದಾಖಲೆಪತ್ರಗಳನ್ನು ಪಡೆದು ಕೊನೆಗೆ ಕೆಲ ನಿಯಮಗಳನ್ನು ಪಾಲನೆ ಮಾಡಿಲ್ಲ. ನಿಮಗೆ ನೀಡಬೇಕಾಗಿದ್ದ ಸಿಎಸ್‌ಆರ್ ದೇಣಿಗೆ ಕೊಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿದ್ದರು. ಗಾಬರಿಗೊಂಡ ಆಶ್ರಮದ ವಕೀಲರು, ಹಣ ವಾಪಸ್ ಕೊಡುವಂತೆ ಕೇಳಿದಾಗ ಹಲ್ಲೆ ನಡೆಸಿ ಆರೋಪಿಗಳು ನಿಂದಿಸಿದ್ದರು. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts