ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಅವರನ್ನು ರಾಯಭಾರಿಯಾಗಲು ಒಪ್ಪಿಸುವುದಾಗಿ ಹೇಳಿ, ಡೆವಲಪರ್ಸ್ ಕಂಪನಿಯ ವ್ಯವಸ್ಥಾಪಕರಿಂದ 13.50 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಎಸ್ವಿ ಗ್ರೂಪ್ ಆ್ಯಂಡ್ ಡೆವಲಪರ್ಸ್ ಕಂಪನಿಯ ವ್ಯವಸ್ಥಾಪಕ ಅಮರನಾಥ್ ರೆಡ್ಡಿಕೊಟ್ಟ ದೂರಿನ ಮೇರೆಗೆ ಚೆನ್ನೈ ಮೂಲದ ಮೊಹಮ್ಮದ್ ಜುನಾಯತ್, ಯುವತಿ ವರ್ಷಾ ಹಾಗೂ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಸಂತನಗರದಲ್ಲಿರುವ ಎಸ್ವಿ ಗ್ರೂಪ್ ಆ್ಯಂಡ್ ಡೆವಲಪರ್ಸ್ ಕಂಪನಿಗೆ ಪ್ರಚಾರ ರಾಯಭಾರಿಯ ಅಗತ್ಯವಿತ್ತು. ಇದೇ ಸಂದರ್ಭದಲ್ಲಿ ಸ್ನೇಹಿತ ಪ್ರಶಾಂತ್ ಮೂಲಕ ಜುನಾಯತ್ ಪರಿಚಯವಾಗಿದ್ದ. ಬಹುಭಾಷಾ ನಟಿ ಪ್ರಣಿತಾ ಅವರನ್ನು ಕಂಪನಿಯ ರಾಯಭಾರಿ ಆಗಿ ನೇಮಕ ಮಾಡಿಸುತ್ತೇನೆ. ಒಪ್ಪಂದ ಪತ್ರಕ್ಕೆ ಅವರಿಂದಲೇ ಸಹಿ ಮಾಡಿಸಿಕೊಡುವುದಾಗಿ ಹೇಳಿದ್ದ. ಹೀಗಾಗಿ, ಜುನಾಯತ್ ಮತ್ತು ವರ್ಷಾ ಚೆನ್ನೈನಿಂದ ಬರಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅ.6ರಂದು ನಗರಕ್ಕೆ ಬಂದಿದ್ದ ಅವರನ್ನು ಖಾಸಗಿ ಹೋಟೆಲ್ವೊಂದರಲ್ಲಿ ಭೇಟಿಯಾಗಿದ್ದರು. ಯುವತಿ ವರ್ಷಾ ಎಂಬಾಕೆಯನ್ನು ನಟಿ ಪ್ರಣಿತಾ ಅವರ ಮ್ಯಾನೇಜರ್ ಎಂದು ಹೇಳಿ ಜುನಾಯತ್ ಪರಿಚಯಿಸಿಕೊಟ್ಟಿದ್ದ.
ಈ ವೇಳೆ ವರ್ಷಾ, ನೀವು ಹಣ ಕೊಟ್ಟರೆ 20 ನಿಮಿಷದೊಳಗೆ ಒಪ್ಪಂದ ಕಾಗದ ಪತ್ರಗಳನ್ನು ಸಿದ್ಧಪಡಿಸುತ್ತೇವೆ ಎಂದಿದ್ದಳು. ಹೀಗಾಗಿ, 13.50 ಲಕ್ಷ ರೂ. ನೀಡಿದ್ದು, ಹಣ ಪಡೆದು ಹೋಟೆಲ್ನ ಕೊಠಡಿಗೆ ಹೋದವರು ವಾಪಸ್ ಬಂದಿಲ್ಲ. ಅಲ್ಲದೆ, ಸಂಪರ್ಕಕ್ಕೂ ಸಿಕ್ಕಿಲ್ಲ. ಈ ಕುರಿತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಅಮರ್ನಾಥ್ ದೂರಿನಲ್ಲಿ ವಿವರಿಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಪೊಲೀಸರು ಮಾಹಿತಿ ನೀಡಿದ್ದಾರೆ.