ನವದೆಹಲಿ: ನವದೆಹಲಿಯಿಂದ ವಿವಿಧ ಸ್ಥಳಗಳಿಗೆ ಮಂಗಳವಾರದಿಂದ 15 ಜೋಡಿ ರೈಲು ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೋ ಸಂವಾದದಲ್ಲಿ ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್ ರಾವ್ ಮೊದಲಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ತಮಿಳುನಾಡು ಸಿಎಂ ಪಳನಿಸ್ವಾಮಿ, ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಛತ್ತೀಗಢದ ಸಿಎಂ ಭೂಪೇಶ್ ಬಘೇಲ್ ಧ್ವನಿಗೂಡಿಸಿದರು.
ಕರೊನಾ ಸೋಂಕಿಗೆ ಒಳಗಾಗಿರುವವರು ಯಾರು ಎಂಬುದನ್ನು ನಿಖರವಾಗಿ ಗುರುತಿಸಿ, ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ಗೆ ಕಳುಹಿಸಲು ಕಷ್ಟವಾಗುತ್ತದೆ. ಆದ್ದರಿಂದ, ರೈಲು ಸಂಚಾರ ಪುನರಾರಂಭಿಸುವುದರಿಂದ ಕರೊನಾ ಪಿಡುಗು ನಿಯಂತ್ರಣಕ್ಕೆ ತುಂಬಾ ತೊಂದರೆಯಾಗುತ್ತದೆ ಎಂದು ಕೆ.ಸಿ. ಚಂದ್ರಶೇಖರ್ ರಾವ್ ಹೇಳಿದರು.