ಬೆಂಗಳೂರು: ಲಾಕ್ಡೌನ್ ನಿಯಮ ದುರ್ಬಳಕೆ ಮಾಡಿಕೊಂಡು ಕೆಂಗೇರಿಯ ಕೊಮ್ಮಘಟ್ಟದ ಬಳಿ ಪೊಲೀಸರ ಸೋಗಿನಲ್ಲಿ ಸ್ನೇಹಿತನ ಬೈಕ್ ಕದ್ದು ಎಟಿಎಂನಿಂದ 94 ಸಾವಿರ ರೂ. ಲಪಟಾಯಿಸಿದ ಇಂಜಿನಿಯರ್ ಸೇರಿ ನಾಲ್ವರು ಕೆಂಗೇರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಸವೇಶ್ವರನಗರದ ನಿವಾಸಿ ಶರತ್ ಶೆಟ್ಟಿ (25), ಪಶ್ಚಿಮ ಬಂಗಾಳ ಮೂಲದ ಪೂರ್ವಿಕ್ ರಾಜ್(21), ಮೋಹನ್ ಕುಮಾರ್ (24), ತಪಸ್ ರಾಯ್ (24) ಬಂಧಿತರು. ಪಶ್ಚಿಮ ಬಂಗಾಳ ಮೂಲದ ಜಾಲಹಳ್ಳಿ ನಿವಾಸಿ ತಪನ್ ಬಿಸ್ವಾಸ್ (37) ಹಣ ಕಳೆದುಕೊಂಡವರು. ಬಂಧಿತರಿಂದ 41 ಸಾವಿರ ರೂ.ನಗದು, 1 ಹೋಂಡಾ ಆಕ್ಟಿವಾ, 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ನಗರದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ತಪನ್ ಬಿಸ್ವಾಸ್ಗೆ ಕೊಮ್ಮಘಟ್ಟ ಬಳಿ ಸೆಂಟ್ರಿಂಗ್ ಕೆಲಸ ಸಿಕ್ಕಿತ್ತು. ಮೇ 25ರಂದು ಸ್ನೇಹಿತ ತಪಸ್ ರಾಯ್ ಜತೆ ಹೋಂಡಾ ಆಕ್ಟಿವಾ ಸ್ಕೂಟರ್ನಲ್ಲಿ ಕೊಮ್ಮಘಟ್ಟದ ಬಳಿ ಕೆಲಸ ಮಾಡಬೇಕಿರುವ ಜಾಗವನ್ನು ನೋಡಿಕೊಂಡು ವಾಪಾಸ್ಸಾಗುತ್ತಿದ್ದರು. ಕೊಮ್ಮಘಟ್ಟ ಮೇಲ್ಸೇತುವೆಯಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಆರೋಪಿಗಳಾದ ಶರತ್ ಶೆಟ್ಟಿ, ಪೂರ್ವಿಕ್ ರಾಜ್, ಮೋಹನ್ ಕುಮಾರ್ ಪೋಲೀಸರ ಸೋಗಿನಲ್ಲಿ ಇವರನ್ನು ಅಡ್ಡಗಟ್ಟಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಏಕೆ ಓಡಾಡುತ್ತಿದ್ದಿರಿ ಎಂದು ಪ್ರಶ್ನಿಸಿ ಸ್ಕೂಟರ್ ಕೀ ಪಡೆದಿದ್ದರು. ನಾವು ಕಟ್ಟಡ ಕೆಲಸದ ನಿಮಿತ್ತ ಹೋಗುತ್ತಿದ್ದೆವು ಎಂದ ತಪನ್ ದಾಖಲೆ ತೋರಿಸಿದರೂ ಲಾಕ್ಡೌನ್ ವೇಳೆ ಹೀಗೆಲ್ಲ ಓಡಾಡಬಾರದು ಎಂದು ಹೇಳಿ ನಿಮ್ಮ ವಾಹನ ಜಪ್ತಿ ಮಾಡುವುದಾಗಿ ತಿಳಿಸಿದ್ದರು.
ಜತೆಗೆ ತಪನ್ ಬಳಿಯಿದ್ದ ಎಟಿಎಂ ಕಾರ್ಡ್ ಹಾಗೂ ಅದರ ಪಾಸ್ವರ್ಡ್, ಆಧಾರ್ ಕಾರ್ಡ್ಗಳನ್ನು ಆರೋಪಿಗಳು ಬಲವಂತವಾಗಿ ಪಡೆದುಕೊಂಡಿದ್ದರು. ಮರುದಿನ ವಾಹನದ ನೈಜ ದಾಖಲೆಗಳ ಜತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದರೆ ನಿಮ್ಮ ದ್ವಿಚಕ್ರ ವಾಹನ ಬಿಟ್ಟು ಕಳಿಸುತ್ತೇವೆ ಎಂದು ಹೇಳಿ ಕಳುಹಿಸಿದ್ದರು. ಮರುದಿನ ಇಬ್ಬರೂ ಬ್ಯಾಡರಹಳ್ಳಿ ಠಾಣೆಗೆ ತೆರಳಿ ದ್ವಿಚಕ್ರವಾಹನ ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸ್ ಸಿಬ್ಬಂದಿ ಇವರ ವಾಹನದ ನಂಬರ್ ಪರಿಶೀಲಿಸಿದಾಗ ಜಪ್ತಿ ಮಾಡಿದ ವಾಹನಗಳ ಪೈಕಿ ಇವರ ದ್ವಿಚಕ್ರವಾಹನದ ಮಾಹಿತಿ ಸಿಕ್ಕಿರಲಿಲ್ಲ. ನಿಮ್ಮ ವಾಹನದ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪೊಲೀಸ್ ಸಿಬ್ಬಂದಿ ಹೇಳಿದ್ದರು.
ಸಿಸಿ ಕ್ಯಾಮರಾದಲ್ಲಿ ಮುಖಚಹರೆ ಪತ್ತೆ:
ಈ ನಡುವೆ ತಪನ್ ಬ್ಯಾಂಕ್ ಖಾತೆಯಲ್ಲಿದ್ದ 94 ಸಾವಿರ ರೂ. ಹಣ ಕಡಿತಗೊಂಡಿತ್ತು. ತಪನ್ ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿರುವ ಮಾಹಿತಿ ಸಿಕ್ಕಿತ್ತು. ಅನುಮಾನಗೊಂಡ ತಪನ್ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿದ್ದ ಸಿಸಿಕ್ಯಾಮರಾ ಪರಿಶೀಲಿಸಿದಾಗ ಮೂವರು ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಜತೆಗೆ ತಪನ್ ಬ್ಯಾಂಕ್ ಖಾತೆಯಿಂದ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದ್ದ ದಾಖಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿತ್ತು. ಆರೋಪಿಗಳು ತಪನ್ ಡೆಬಿಟ್ ಕಾರ್ಡ್ ಬಳಸಿ ಎಟಿಎಂ ಕೇಂದ್ರದಿಂದ 10 ಸಾವಿರ ರೂ. ಡ್ರಾ ಮಾಡಿದ್ದರು. ಉಳಿದ 84 ಸಾವಿರ ರೂ.ನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.
ಸ್ನೇಹಿತನಿಂದಲೇ ಕೃತ್ಯ !
ಸಿಸಿಕ್ಯಾಮರಾ ನೀಡಿದ ಸುಳಿವಿನ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೂರುದಾರ ತಪನ್ ಬಿಸ್ವಾಲ್ನ ಸ್ನೇಹಿತ ತಪಸ್ ರಾಯ್ ಇತರ ಆರೋಪಿಗಳೊಂದಿಗೆ ಶಾಮೀಲಾಗಿ ಕೃತ್ಯ ಎಸಗಿರುವ ಸಂಗತಿ ಬೆಳಕಿಗೆ ಬಂದಿತ್ತು. ತಪನ್ ಕೈ ಕೆಳಗೆ ಕೆಲಸ ಮಾಡುತ್ತಿದ್ದ ತಪಸ್ಗೆ ಆತ ಕೇಳಿದಾಗಲೆಲ್ಲ ಹಣ ಕೊಟ್ಟಿರಲಿಲ್ಲ. ಇದರಿಂದ ಆಕ್ರೋಶಗೊಂಡು ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ತಪಸ್ ತಿಳಿಸಿದ್ದಾನೆ. ಕದ್ದ ಹಣವನ್ನು ಆರೋಪಿಗಳು ಸಮಾನವಾಗಿ ಹಂಚಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶರತ್ ಶೆಟ್ಟಿ ಸಿವಿಲ್ ಇಂಜಿನಿಯರ್ ಆಗಿದ್ದರೆ, ಪೂರ್ವಿಕ್ ರಾಜ್ 4ನೇ ಸೆಮ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಮೋಹನ್ ಕುಮಾರ್ ಕಂಪ್ಯೂಟರ್ ಆಪರೇಟರ್ ಆಗಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಲಸ ಬಿಟ್ಟಿದ್ದ.
ಸಂಜೀವ್ ಎಂ ಪಾಟೀಲ್, ಡಿಸಿಪಿ, ಪಶ್ಚಿಮ ವಿಭಾಗ
ರಾಹುಲ್ ಗಾಂಧಿ ಸ್ವಚ್ ಟ್ವಿಟ್ಟರ್ ಅಭಿಯಾನ! ಪಕ್ಷದ ನಾಯಕರು, ಪತ್ರಕರ್ತರು ಸೇರಿ 50 ಮಂದಿಯನ್ನು ಅನ್ಫಾಲೋ..
‘ಅಪ್ಪಾ, ನನ್ನ ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ವೈದ್ಯೆ
ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!