ಮಂಡ್ಯ: ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರವಿದ್ದ ಸಂದರ್ಭದಲ್ಲಿ ದಲಿತ ಸಮುದಾಯದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ದೇವೇಗೌಡರ ಕುಟುಂಬದವರು ನೀಡಿದ್ದಾರೆ. ಮತ್ತಷ್ಟು ಯೋಜನೆಗಳು ಅವರಿಂದ ಬರುವಂತಾಗಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೈಹಿಡಿಯಬೇಕು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮನವಿ ಮಾಡಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ, ಗಂಗಾ ಕಲ್ಯಾಣ ಯೋಜನೆಗಳು, ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಜಾರಿಯಾಗಿವೆ. ಇವೆಲ್ಲವೂ ದಲಿತರಿಗೆ ಪೂರಕ ಯೋಜನೆಗಳಾಗಿವೆ. ಇದರಿಂದ ದಲಿತ ಸಮುದಾಯದ ಅಭಿವೃದ್ಧಿಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ಮೀಸಲಾಗಿದ್ದ 11,500 ಕೋಟಿ ರೂ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ದಲಿತರಿಗೆ ಮೀಸಲಾಗಿದ್ದ ಅನುದಾನ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡರೆ ಕ್ರಿಮಿನಲ್ ಅಪರಾಧವೆಂದು ಸರ್ಕಾರವೇ ಹೇಳುತ್ತದೆ. ಮತ್ತೊಂದೆಡೆ ಸರ್ಕಾರವೇ ಇಂತಹ ಕೆಲಕಕ್ಕೆ ಮುದಾಗಿರುವುದು ದಲಿತರಿಗೆ ಮಾಡಿರುವ ದ್ರೋಹವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ 98 ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರುವ ಮೂಲಕ ದಲಿತರ ಬದುಕಿಗೆ ಪೆಟ್ಟು ನೀಡಿದ್ದರು. ಇದು ಸಂವಿಧಾನ ವಿರೋಧಿ ಕ್ರಮವಲ್ಲವೇ?. ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ದಲಿತ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗುವುದಾದರೆ ಅವರು ಏಕೆ ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ. ಖರ್ಗೆ ಅವರ ಮುಖ ತೋರಿಸಿ ದಲಿತರ ಮತ ಪಡೆಯುವ ಹುನ್ನಾರ ಕಾಂಗ್ರೆಸ್ನದ್ದು ಎಂದು ಟೀಕಿಸಿದರು.
ಮಾಜಿ ಸಚಿವ ಹಾಲ್ಕೋಡು ಹನುಮಂತಪ್ಪ ಮಾತನಾಡಿ, ರಾಜ್ಯದ ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲು ಪ್ರಭಾವಿಗಳು ಕೇಂದ್ರವನ್ನು ಪ್ರತಿನಿಧಿಸಬೇಕು. ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಆ ಪ್ರಭಾವ ಇದೆ. ಇದರಿಂದಾಗಿ ರಾಜ್ಯ ಮತ್ತು ಜಿಲ್ಲೆಗೆ ಒಳಿತಾಗಲಿದೆ. ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಪ್ರವಾಸ ಮಾಡಿದಾಗ ಅಲ್ಲಿನ ಜನತೆ ಬಿಟ್ಟಿ ಗ್ಯಾರಂಟಿ ಬೇಡ ಎನ್ನುತ್ತಾರೆ. ಆದರಿಂದ ರಾಜ್ಯ ಮತ್ತು ಜನರಿಗೆ ಅನುಕೂಲವಾಗದೆಂದು ತಿಳಿಸಿದ್ದಾರೆ ಎಂದು ವಿವರಿಸಿದರು.
ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ, ಮುಖಂಡರಾದ ಕೃಷ್ಣಮೂರ್ತಿ, ಸಿ.ಕೆ.ಪಾಪಯ್ಯ, ಭದ್ರಾಚಲಮೂರ್ತಿ ಇತರರಿದ್ದರು.