ವಿಜಯಪುರ: ಆನೆ ಬಿಟ್ಟು ಇಲಿ ಹಿಡಿಯಲು ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ.
ಸೋಮವಾರ ಸುದ್ದಿಗಾರರ ಬಳಿ ಮಾತನಾಡಿದ ಎಂ.ಬಿ.ಪಾಟೀಲ್, ಲಿಂಗಾಯತ ಸರ್ವತೋಮುಖ ಪ್ರಗತಿಯ ಏಕೈಕ ಉದ್ದೇಶದಿಂದ ಅಲ್ಪಸಂಖ್ಯಾತ ಮಾನ್ಯತೆ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೆ. ಆದರೆ ಆಗ ನನಗೆ ಧರ್ಮ ವಿರೋಧಿ, ಧರ್ಮ ಒಡೆಯುವವ ಎಂಬಿತ್ಯಾದಿ ಅಪಪ್ರಚಾರ ಮಾಡಿದರು. ಈಗ ಕೇವಲ ನಿಗಮ ರಚನೆ ಮಾಡಿ ಏನು ಸಾಧಿಸಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
1.5 ಕೋಟಿಯಷ್ಟಿರುವ ಲಿಂಗಾಯತ ಸಮುದಾಯದ ಸರ್ವತೋಮುಖ ಪ್ರಗತಿಗಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ದೊರಕಿಸಿ, ಸಮುದಾಯದ ಬಡ ಜನರಿಗೆ ಸೌಲಭ್ಯ ಒದಗಿಸುವುದು, ಶೈಣಿಕ, ಔದ್ಯೋಗಿಕ ಪ್ರಗತಿಗಾಗಿ ಹೋರಾಟ ನಡೆಸುತ್ತಿದ್ದೆ. ಆಗ ನನ್ನನ್ನು ವಿರೋಧಿಸಿದರು. ಧರ್ಮ ವಿರೋಧಿ ಎಂಬ ಪಟ್ಟ ಕಟ್ಟಲು ಮುಂದಾದರು. ಈಗ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಏನು ಸಾಧಿಸಲು ಹೊರಟಿದ್ದಾರೆ ಎಂಬುದು ಗೊತ್ತಿಲ್ಲ. ನಿಗಮ ಸ್ಥಾಪನೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ, ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ಅನುದಾನ ಮೀಸಲಿಟ್ಟರೆ ಮಾತ್ರ ಏನಾದರೂ ಸಮಾಜಕ್ಕೆ ಅನುಕೂಲವಾಗಲಿದೆ ಎಂದು ಪಾಟೀಲ್ ಹೇಳಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ ರಾಜ್ಯ ಸರ್ಕಾರ ಆನೆ ಬಿಟ್ಟು ಇಲಿ ಹಿಡಿಯಲು ಹೊರಟಿದೆ. ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ವಿರೋಧಿಸಿದವರು ಸೋಲಾಪುರದಲ್ಲಿ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಲಿಂಗಾಯತರ ಭವಿಷ್ಯ ಹಾಳು ಮಾಡಿದವರ ಬಗ್ಗೆ ಭವಿಷ್ಯದಲ್ಲಿ ಬಹಿರಂಗ ಮಾಡುವೆ ಎಂದು ಎಚ್ಚರಿಸಿದರು.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.; ಸ್ಥಾಪನೆಗೆ ಆದೇಶ ಹೊರಡಿಸಿದ ಸರ್ಕಾರ
ತನ್ನ ಮನೆಯಲ್ಲೇ ಭಾವಿ ಪತಿಗೆ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್!