ನವದೆಹಲಿ : ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ರಾಜಕೀಯ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಘೋಷಿಸಿದ್ದಾರೆ. ಇಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ‘ಅಲ್ವಿದಾ’ ಹೇಳಿರುವ ಸುಪ್ರಿಯೊ, ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ಕೊಡುವುದಾಗಿ ಬರೆದಿದ್ದಾರೆ.
ಬಂಗಾಳಿಯಲ್ಲಿ ಕಾವ್ಯಮಯವಾಗಿ ಬರೆದಿರುವ ಸುದೀರ್ಘ ಸಂದೇಶದಲ್ಲಿ ಕಲಾವಿದರೂ ಆಗಿರುವ ಸುಪ್ರಿಯೋ, “ಸಾಮಾಜಿಕ ಕಾರ್ಯ ಮಾಡುವುದಕ್ಕೆ ರಾಜಕೀಯದಲ್ಲಿರುವ ಅಗತ್ಯವಿಲ್ಲ” ಎಂದಿದ್ದಾರೆ. ಇತ್ತೀಚೆಗೆ, ಸಂಪುಟ ಪುನರ್ರಚನೆಯಾದಾಗ ಮಂತ್ರಿಗಿರಿ ಕಳೆದುಕೊಂಡ ಸುಪ್ರಿಯೊ, ತಮಗೆ ಯಾವುದೋ ಸ್ಥಾನ ಬೇಕು ಎಂದು ಈ ರೀತಿ ಮಾಡುತ್ತಿಲ್ಲ, ತಪ್ಪು ತಿಳಿದುಕೊಳ್ಳಬೇಡಿ ಎಂದಿದ್ದಾರೆ.
ರಾಜಕೀಯ ತೊರೆಯಬೇಕು ಎಂದು ಕಳೆದ ಕೆಲವು ದಿನಗಳಲ್ಲಿ ತೀರ್ಮಾನಿಸಿದ್ದೇನೆ. ನನಗೆ ಹಲವು ರೀತಿಯಲ್ಲಿ ಪ್ರೇರಣೆಯಾಗಿರುವ ಅಮಿತ್ ಷಾ ಮತ್ತು ನಡ್ಡಾ ಅವರಿಗೆ ಧನ್ಯವಾದಗಳು ಎಂದು ಸುಪ್ರಿಯೋ ಹೇಳಿದ್ದಾರೆ. ಈ ಪೋಸ್ಟ್ನಲ್ಲಿ 2014ರ ಮತ್ತು 2019ರ ತಮ್ಮ ಚುನಾವಣೆಯ ಸಂದರ್ಭ, ಬಂಗಾಳದಲ್ಲಿ ಬಿಜೆಪಿ ಸೋಲಿನ ಪರಿಸ್ಥಿತಿಯ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರವಾದ ಬಂಗಾಳದ ಅಸನ್ಸೊಲ್ ಜನತೆಗೆ ಧನ್ಯವಾದ ಸೂಚಿಸಿದ್ದಾರೆ. (ಏಜೆನ್ಸೀಸ್)
ಕರೊನಾತಂಕ: ಮತ್ತೆ ಗಡಿಗಳಲ್ಲಿ ಚೆಕ್ಪೋಸ್ಟ್! ಈ ರಾಜ್ಯಗಳಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ!