ಲಖನೌ: ಸೇವಾ ಅವಧಿ ಮುಗಿಯುವ ಮುನ್ನ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಆದೇಶಿಸಲ್ಪಟ್ಟ ಉತ್ತರ ಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಸ್ಪರ್ಧೆಗಿಳಿಯಲು ಮುಂದಾಗಿದ್ದಾರೆ.
ಅಮಿತಾಭ್ ಠಾಕೂರ್ ಅವರ ಪತ್ನಿ ನೂತನ್ ಠಾಕೂರ್ ಇಂದು ಲಖನೌನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, “ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಹಲವು ತಪ್ಪು ಮತ್ತು ಭೇದಭಾವದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ಅವರು ನಿಲ್ಲುವ ಕ್ಷೇತ್ರದಲ್ಲೇ ಅಮಿತಾಭ್ ಚುನಾವಣೆ ಎದುರಿಸಲಿದ್ದಾರೆ” ಎಂದಿದ್ದಾರೆ. “ಅಮಿತಾಭ್ಗೆ ಇದು ಸಿದ್ಧಾಂತಗಳ ಹೋರಾಟವಾಗಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂರು ಪಾಲಿಕೆ ‘ಕೈ’ವಶ ಮಾಡಿಕೊಳ್ಳುವ ಸಿದ್ಧತೆ ಶುರು
ಕಳೆದ ಮಾರ್ಚ್ 23 ರಂದು ಕೇಂದ್ರ ಗೃಹ ಸಚಿವಾಲಯದ ನಿರ್ಧಾರದ ಮೇರೆಗೆ “ಸಾರ್ವಜನಿಕ ಹಿತಾಸಕ್ತಿಯಿಂದ” ಅಮಿತಾಭ್ ಠಾಕೂರ್ಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. 2028 ರವರೆಗೆ ಸೇವಾ ಅವಧಿ ಹೊಂದಿದ್ದ ಅವರು “ಉಳಿದ ಸೇವಾ ಅವಧಿಯಲ್ಲಿ ಮುಂದುವರಿಸಲು ಯೋಗ್ಯರಾಗಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿತ್ತು ಎನ್ನಲಾಗಿದೆ.
2015 ರಲ್ಲಿ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಯಾದವ್ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ಅಮಿತಾಭ್ ಠಾಕೂರ್ರನ್ನು ಸಸ್ಪೆಂಡ್ ಮಾಡಲಾಗಿತ್ತು. ಅವರ ವಿರುದ್ಧ ವಿಜಿಲೆನ್ಸ್ ತನಿಖೆ ಕೂಡ ಆದೇಶಿಸಲಾಗಿತ್ತು. ಆದರೆ 2016 ರ ಏಪ್ರಿಲ್ನಲ್ಲಿ ಅವರ ಅಮಾನತು ಆದೇಶಕ್ಕೆ ಸಿಎಟಿ ತಡೆ ನೀಡಿದ್ದು, ಸೇವೆಯನ್ನು ಮುಂದುವರಿಸಲಾಗಿತ್ತು. 2017 ರಲ್ಲಿ ಅಮಿತಾಭ್ ಠಾಕೂರ್ ಉತ್ತರಪ್ರದೇಶದಿಂದ ಹೊರಕ್ಕೆ ವರ್ಗಾವಣೆ ಕೇಳಿದ್ದರು. ಇದೀಗ ಮಾರ್ಚ್ನಲ್ಲಿ ಅವರಿಗೆ ಅವಧಿಗೆ ಮುಂಚಿತವಾಗಿ ಕಡ್ಡಾಯ ನಿವೃತ್ತಿ ನೀಡಲಾಗಿತ್ತು ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)
ರಾಹುಲ್ ಗಾಂಧಿ ಇನ್ಸ್ಟಾಗ್ರಾಂ ವಿಡಿಯೋ: ಫೇಸ್ಬುಕ್ ಅಧಿಕಾರಿಗಳಿಗೆ ಮಕ್ಕಳ ಆಯೋಗದ ಬುಲಾವ್!