ಬೆಂಗಳೂರು: ಕರ್ನಾಟಕ ಕೇಡರ್ನ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ದೆಹಲಿಯಲ್ಲಿಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.
ದೆಹಲಿಯ ಕೇಂದ್ರ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಮತ್ತು ವಕ್ತಾರ ಸಂಬಿತ್ ಪಾತ್ರಾ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಇಂದು ಬೆಳಗ್ಗೆಯಷ್ಟೇ ಸಚಿವ ಕೆ. ಸುಧಾಕರ್ ಅವರು ಟ್ವೀಟ್ ಮೂಲಕ ಮಾಹಿತಿ ಖಚಿತಪಡಿಸಿದ್ದರು. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.ಅವರಿಗೆ ಹೃದಯಪೂರ್ವಕ ಸ್ವಾಗತ ಎಂದಿದ್ದರು.
ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ, ದಕ್ಷ ಅಧಿಕಾರಿ ಎಂದು ಕರೆಸಿಕೊಂಡಿದ್ದ ಅಣ್ಣಾಮಲೈ ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಸೇರುತ್ತಾರೆ ಎಂದು ಚರ್ಚೆಯಾಗಿತ್ತು. ಅದರಂತೆಯೇ ಇಂದು ಬಿಜೆಪಿಗೆ ಸೇರಿದ್ದು, ಇಷ್ಟು ದಿನ ಅವರ ಸೇವೆಯನ್ನು ಮಿಸ್ ಮಾಡಿಕೊಂಡಿದ್ದ ಜನರು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅವರ ಸೇವೆಯನ್ನು ನೋಡಬಹುದಾಗಿದೆ.
2011ನೇ ಬ್ಯಾಚ್ ಅಧಿಕಾರಿ
1984 ಜೂ.4ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಜನಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿಇ ವ್ಯಾಸಂಗ ಮಾಡಿ, ಎಂಬಿಎ ಪದವಿ ಪಡೆದಿದ್ದಾರೆ. 2011ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಆಗಿದ್ದಾರೆ. ಕಾರ್ಕಳ ಉಪ ವಿಭಾಗದ ಎಎಸ್ಪಿಯಾಗಿ ವೃತ್ತಿ ಆರಂಭ. 2013ರಲ್ಲಿ ಉಡುಪಿ ಎಸ್ಪಿ, ನಂತರ ಚಿಕ್ಕಮಗಳೂರು ಎಸ್ಪಿ ಆಗಿ ಸೇವೆ. 2018ರ ಅ.17ರಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕಾರ.
VIDEO| ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ದಕ್ಷತೆ ಪಟ್ಟ ತಂದುಕೊಟ್ಟ ರೋಚಕ ಘಟನೆಗಳಿವು!