ಬೆಳಗಾವಿ: ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಣಕ್ಕೆ ಬೇಡಿಕೆ ಇಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರ ಹಾಗೂ ಜಿಲ್ಲೆಯಲ್ಲಿ ಆಯುಷ್ ವೈದ್ಯರ ಬಳಿ ಹೋಗಿ ಪತ್ರಕರ್ತರು ಎಂದು ಹೇಳಿಕೊಂಡು ಆಗಮಿಸಿದ ಕೆಲವರು ಆಸ್ಪತ್ರೆಯ ದಾಖಲೆ ಮತ್ತು ಯಾವ ರೀತಿ ಚಿಕಿತ್ಸೆ ರೀತಿ ಮಾಡುತ್ತಿರಿ ಎಂದು ಪ್ರಶ್ನಿಸುತ್ತಾರೆ. ನಮಗೆ ಕೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸುದ್ದಿ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಅಲ್ಲದೆ ಕೆಲವು ಕಡೆ ಹಣವನ್ನೂ ಪಡೆದಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆಯುಷ್ ವೈದ್ಯರು ಆರೋಪಿಸಿದರು. ಆಯುಷ್ ವೈದ್ಯರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಬಿಟ್ಟರೆ ಬೇರೆ ಯಾರೂ ಪರಿಶೀಲನೆ ಮಾಡುವಂತಿಲ್ಲ ಎಂಬ ನಿಯಮವಿದೆ. ಹಾಗಾಗಿ, ಇಂತಹ ನಕಲಿ ಪತ್ರಕರ್ತರನ್ನು ಕೂಡಲೇ ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಲಾಲ್ ಜಮಾದಾರ, ರಾಜಶೇಖರ ಪಾಟೀಲ ಎಂಬುವವರು ಕೆಎ-24 ಎಂ-8224 ನಂಬರ್ ವಾಹನದಲ್ಲಿ ಬಂದು ವೈದ್ಯರನ್ನು ಪ್ರಶ್ನಿಸಿ ಹಣ ಕೇಳಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಡಾ. ಪದ್ಮರಾಜ ಪಾಟೀಲ, ಡಾ. ಎ.ಎಸ್. ಕೋಣೆ, ಡಾ. ಜ್ಯೋತಿ ಖೋತ, ಡಾ. ರಾಜೇಶ ಪಾಟೀಲ, ಡಾ. ನಾಡಗೌಡ, ಡಾ. ರಾಜೇಶ ಪಾಟೀಲ, ಡಾ. ವಿನಾಯಕ ಪಾಟೀಲ ಇತರರಿದ್ದರು.