ಕಂಪ್ಲಿ: ಕೆಲ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ ಅದಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ಸಮೀಕ್ಷೆ ವರದಿ ಬಿಡುಗಡೆಗೆ ಒತ್ತಾಯ
ಪಟ್ಟಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಶನಿವಾರ ಹಮ್ಮಿಕೊಂಡಿದ್ದ ಆದಿಕವಿ ವಾಲ್ಮೀಕಿ ಮಹರ್ಷಿ ಜಾತ್ರೆಯ ಪೂರ್ವಭಾವಿಸಭೆಯಲ್ಲಿ ಮಾತನಾಡಿದರು.
ತ್ಯಾಗ ಶ್ರೇಷ್ಠತೆ ಬಗ್ಗೆ ಜಗತ್ತಿಗೆ ವಾಲ್ಮೀಕಿ ರಾಮಾಯಣ ತೋರಿಸಿಕೊಟ್ಟಿದ್ದು, ಮೌಲ್ಯಧಾರಿತ ಬದುಕನ್ನು ಕಟ್ಟಿಕೊಡುತ್ತದೆ. ಗುರುಗಳ ಜೀವನ, ತತ್ವಾದರ್ಶಗಳ ಮಹತ್ವ ಪ್ರೇರೇಪಿಸಲು ಜಾತ್ರೆ ಹಮ್ಮಿಕೊಂಡಿದೆ. ಸಮುದಾಯದವರ ಸಂಘಟಿತ ಹೋರಾಟದಿಂದಾಗಿ ಶೇ.7ಮೀಸಲು ದೊರಕಲು ಸಾಧ್ಯವಾಗಿದೆ. ರಾಜಕೀಯ, ಶಿಕ್ಷಣ, ಉದ್ಯೋಗಕ್ಕೆ ಅನುಕೂಲವಾಗಿದೆ ಎಂದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ವಾಲ್ಮೀಕಿ ಸಮುದಾಯದವರು ಸಂಘಟಿತರಾದಲ್ಲಿ ಮಾತ್ರ ಅರ್ಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಮಠ ಮತ್ತು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಪ್ರಸನ್ನಾನಂದ ಶ್ರೀಗಳು ಅಹರ್ನಿಶಿ ಶ್ರಮಿಸುತ್ತಿದ್ದಾರೆ ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಬಿ.ನಾರಾಯಣಪ್ಪ, ನಗರ ಅಧ್ಯಕ್ಷ ಡಿ.ಯಲ್ಲಪ್ಪ, ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎ.ಹುಲುಗಪ್ಪ, ಪ್ರಮುಖರಾದ ನೀರಗಂಟಿ ವೀರೇಶ್, ಡಿ.ಈರಣ್ಣ, ವಿ.ಮರಿಲಿಂಗಪ್ಪ, ಎನ್.ರಾಮಾಂಜನೇಯಲು, ಡಾ.ವೆಂಕಟೇಶ್, ಎನ್.ಮಂಜುನಾಥ, ವಾಲ್ಮೀಕಿ ಈರಣ್ಣ ಇತರರಿದ್ದರು.