ಬೆಳಗಾವಿ: ಹಿಂದುಳಿದವರು, ಆದಿವಾಸಿ, ಅಲೆಮಾರಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರು ನಮ್ಮ ಹಕ್ಕಿಗಾಗಿ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜಿಲ್ಲಾಮಟ್ಟದ ಸಂಘಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ. 28ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಿರುವ ರಾಜ್ಯ ಶೋಷಿತರ ಜಾಗೃತಿ ಸಮಾವೇಶವನ್ನು ಯಶ್ವಸಿಗೊಳಿಸಬೇಕು ಎಂದರು.
ಒಕ್ಕೂಟದ ರಾಜ್ಯ ಸಂಚಾಲಕ ಅನಂತ ನಾಯಕ ಮಾತನಾಡಿ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರು, ಒಬಿಸಿಗಳು ಇಷ್ಟು ದಿನ ಬೇಡಿಕೆಗಳಿಗಾಗಿ ಬೇರೆ ಬೇರೆ ವೇದಿಕೆಗಳಲ್ಲಿ ಹೋರಾಟ ಮಾಡುತ್ತಿದ್ದವು. ಆದರೆ, ಇಂದು ಒಂದಾಗಿ ಹೋರಾಟಕ್ಕಿಳಿದಿರುವುದು ಸಂತಸದ ವಿಚಾರ. ನಾವೆಲ್ಲರೂ ಒಗ್ಗಟ್ಟಾದರೆ ಜಯ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಮಾಜಿ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ, ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಎನ್ನಗೇರೆ ವೆಂಕಟರಾಮಯ್ಯ, ಡಾ. ರಾಜೇಂದ್ರ ಸಣ್ಣಕ್ಕಿ, ಆದರ್ಶ ಯಲ್ಲಪ್ಪ, ಎಂ. ಈರಣ್ಣ, ಬಸವರಾಜ ಬಸವಳಿಗುಂದಿ, ಮಲ್ಲೇಶ ಚೌಗಲೆ, ಬ. ಸುಬ್ರಮಣ್ಯ, ರಾಮಚಂದ್ರಪ್ಪ, ಬೆಂಗಳೂರಿನ ಮಾಜಿ ಕಾರ್ಫೋರೇಟರ್ ಜಿ. ಕೃಷ್ಣಮೂರ್ತಿ, ಎಂ. ಕೃಷ್ಣಮೂರ್ತಿ, ಮಡೆಪ್ಪ ತೋಳಿನವರ, ಸಿದ್ಧಾರ್ಥ ಸಿಂಗೆ, ಕರೆಪ್ಪ ಗುಡೆನ್ನವರ, ರುದ್ರಪ್ಪ ಸಂಗಪ್ಪಗೊಳ, ವಿಠ್ಠಲ ಪೋಳ ಇತರರಿದ್ದರು.