More

    ಅಧಿಕಾರಿಗಳಿಗೆ ಕವಟಗಿಮಠ ತರಾಟೆ

    ಚಿಕ್ಕೋಡಿ: ಖಡಕಲಾಟ, ಪಟ್ಟಣಕುಡಿ ಹಾಗೂ ವಾಳಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಏಕೆ ಪೂರೈಸುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಆನಂದ ಬಣಕಾರ ಅವರನ್ನು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ಕರೊನಾ ವೈರಸ್ ಹರಡದಂತೆ ಜಾಗೃತಿ ಹಾಗೂ ಅಧಿಕಾರಿಗಳು ಅಗತ್ಯ ಸಾಮಗ್ರಿ ಪೂರೈಕೆಗಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು. ಗ್ರಾಮಗಳಿಗೆ ಹತ್ತು ದಿನಗಳ ಕಾಲ ನೀರು ಪೂರೈಸುವುದಿಲ್ಲವೆಂದಾದರೆ ಅಂಥ ಯೋಜನೆ ಮಾಡಿರುವುದಾದರೂ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ತೋಟಗಾರಿಕೆ ಬೆಳೆಗಳ ಬಗೆಗೆ ಸಮರ್ಪಕ ಮಾಹಿತಿ ಒದಗಿಸದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್. ಪಾಟೀಲ ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕರು ಸಮರ್ಪಕ ಮಾಹಿತಿ ನೀಡಿಲ್ಲ. ತಾಲೂಕಿನ ರೈತರು ಯಾವ ಬೆಳೆ ಬೆಳೆಯುತ್ತಿದ್ದಾರೆ ಎಂಬುದನ್ನು ಪತ್ರಿಕೆ ನೋಡಿ ತಿಳಿಯಬೇಕಾಗಿದೆ. ಒಂದು ವಾರದ ಹಿಂದೆ ಕೇಳಿದ ಮಾಹಿತಿ ಈವರೆಗೂ ತಯಾರಿಸಿಲ್ಲ.

    ಇದರಿಂದಾಗಿಯೇ ರೈತರು ಹಾಳಾಗುತ್ತಿದ್ದಾರೆ ಎಂದು ಕವಟಗಿಮಠ ಹರಿಹಾಯ್ದರು. ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸಲು ಸರ್ಕಾರ ಮುಂದಾಗಿದ್ದರೂ ಮಾಹಿತಿ ಕೊರತೆಯಿಂದ ರೈತರು ಬೆಳೆದ ತರಕಾರಿ ಹಾಳಾಗುತ್ತಿದೆ. ಯಾವುದೇ ಪರಿಸ್ಥಿತಿಯಲ್ಲಿ ನನಗೆ ಶುಕ್ರವಾರ ಸಂಜೆ ಒಳಗಾಗಿ ವಿಡಿಯೋ ಕಾನ್ಫರೆನ್ಸ್ ನಡೆಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಒದಗಿಸಬೇಕು ಎಂದು ಖಡಕ್ ಸೂಚನೆ ನೀಡಿದರು. ತಹಸೀಲ್ದಾರ್ ಎಸ್.ಎಸ್. ಸಂಪಗಾವಿ, ಡಿವೈಎಸ್ಪಿ ಮನೋಜಕುಮಾರ ನಾಯಕ, ಮಂಜುನಾಥ ಜನಮಟ್ಟಿ ಸೇರಿ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts