ನವದೆಹಲಿ: ಕರೊನಾ ಸೋಂಕಿನಿಂದ ಪಾರಾಗಲು ಜಗತ್ತಿನಾದ್ಯಂತ ಔಷಧ ಸಂಶೋಧನೆ, ನಾನಾ ಲಸಿಕೆಗಳ ಟ್ರಯಲ್ಗಳು ನಡೆಯುತ್ತಲೇ ಇದೆ. ಮತ್ತೊಂದೆಡೆ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿ ಇರುವವರಿಗೆ ಪ್ರಾಣಿಗಳ ರಕ್ತದಲ್ಲಿ ಪರಿಹಾರವಿದೆ ಎಂಬ ಅಂಶವೂ ಇದೀಗ ಬಹಿರಂಗಗೊಂಡಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹಾಗೂ ಹೈದರಾಬಾದ್ ಮೂಲದ ಔಷಧ ಕಂಪನಿ ಬಯಲಾಜಿಕಲ್ ಇ. ಲಿಮಿಟೆಡ್ ಜತೆಯಾಗಿ ಇಂಥದ್ದೊಂದು ಪರಿಹಾರವನ್ನು ಕಂಡುಕೊಂಡಿವೆ.
ಪ್ರಾಣಿಗಳ ರಕ್ತದಲ್ಲಿನ ಆ್ಯಂಟಿಸೀರಂ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ದೇಹಕ್ಕೆ ಇಂಜೆಕ್ಟ್ ಮಾಡುವ ಮೂಲಕ ಕೋವಿಡ್-19ಗೆ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂಬುದನ್ನು ಐಸಿಎಂಆರ್ ಹಾಗೂ ಬಯಾಲಜಿಕಲ್ ಇ. ಲಿಮಿಟೆಡ್ ಸಂಶೋಧನೆ ನಡೆಸಿವೆ.
ಪ್ಲಾಸ್ಮಾ ಚಿಕಿತ್ಸೆ ಬಳಿಕ ಇದು ಇನ್ನೊಂದು ಮಹತ್ವದ ಚಿಕಿತ್ಸಾ ವಿಧಾನವಾಗಿದೆ. ಪ್ಲಾಸ್ಮಾ ಚಿಕಿತ್ಸೆಯಿಂದ ಅಂಥ ಫಲಿತಾಂಶ ಸಿಗದಿದ್ದರೂ ಇದೀಗ ಆ್ಯಂಟಿಸೀರಂ ಥೆರಪಿ ಬಗ್ಗೆ ಐಸಿಎಂಆರ್ ವಿಶ್ವಾಸ ಇರಿಸಿಕೊಂಡಿದೆ ಎನ್ನಲಾಗಿದೆ.
464 ಮಂದಿಯನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದ್ದು, ಏಪ್ರಿಲ್ 22ರಿಂದ ಜುಲೈ 14ರ ಅವಧಿಯಲ್ಲಿ ಟ್ರಯಲ್ ಕೈಗೊಳ್ಳಲಾಗಿದೆ. ಅದಾಗ್ಯೂ ಐಸಿಎಂಆರ್ ಈ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. (ಏಜೆನ್ಸೀಸ್)