ರಾಯಬಾಗ (ಬೆಳಗಾವಿ): ಕರೊನಾ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾದ ಅಧಿಕಾರಿಗಳು ಸಣ್ಣದೊಂದು ಕಸಬರಿಗೆ (ಪೊರಕೆ) ವಿಷಯಕ್ಕೆ ಜಗಳವಾಡಿದ ಘಟನೆ ತಾಲೂಕಿನ ನಾಗರಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಮವಾರ ಸಂಜೆ ನಡೆದಿದೆ.
ಪೊರಕೆ ವಿಚಾರವಾಗಿ ರಾಯಬಾಗ ಕಂದಾಯ ನಿರೀಕ್ಷಕ ಗೌಡಪ್ಪ ಸಸಾಲಟ್ಟಿ ಮತ್ತು ನಾಗರಾಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ವಿನಾಯಕ ಭಾಟೆ ಅವರು ತಹಸೀಲ್ದಾರ್ ಎನ್.ಬಿ. ಗೆಜ್ಜೆ ಅವರ ಎದುರೇ ಜಗಳವಾಡಿಕೊಂಡಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಎರಡು ಕಸಬರಿಗೆ ಕಾಣೆಯಾದ ವಿಚಾರಕ್ಕೆ ಪ್ರಾರಂಭವಾದ ಜಗಳ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ಬಳಿಕ ಅಲ್ಲಿಯೇ ಇದ್ದ ತಹಸೀಲ್ದಾರ್ ಗೆಜ್ಜೆ ಮಧ್ಯೆ ಪ್ರವೇಶಿಸಿ ಸಮಾಧಾನ ಮಾಡಿ ಕಳುಹಿಸಿದರು.ತಾಲೂಕಿನಲ್ಲಿ ಕರೊನಾ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಾದವರೇ ಗಲಾಟೆ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.