ಬಾಗಲಕೋಟೆ: ಪ್ರವಾಹ ಸಂತ್ರಸ್ತನೋರ್ವನ ಮನೆಗೆ ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಕೆಲವರು 12,500 ರೂಪಾಯಿ ಹಾಗೂ ಮೂರು ಮೊಬೈಲ್ಗಳನ್ನು ತೆಗೆದುಕೊಂಡು ಹೋದ ಘಟನೆ ನಡೆದಿದೆ.
ಈ ವಂಚನೆ ಪ್ರಕರಣ ಡಿಸೆಂಬರ್ 23ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಲಕ್ಷ್ಮಣ ಅಲಗೂರು ಎಂಬುವರ ಮನೆ ಮೇಲೆ ಈ ನಕಲಿ ಐಟಿ ದಾಳಿ ನಡೆದಿದೆ.
ಲಕ್ಷ್ಮಣ ಅಲಗೂರು ಆಟೋಚಾಲಕ. ಇವರ ಮನೆಗೆ ಕೋಟಿ ಕೋಟಿ ರೂಪಾಯಿ ಹಣ ಬಂದಿದೆ. ಅದು ಪ್ರವಾಹದ ವೇಳೆ ತೇಲಿಸಿಕೊಂಡು ಬಂದ ದುಡ್ಡು ಎಂದು ಇತ್ತೀಚೆಗೆ ಸುದ್ದಿ ಹಬ್ಬಿತ್ತು. ಇದೇ ಸುದ್ದಿ ನಂಬಿಕೊಂಡು ಡಿ.23ರಂದು ಮುಂಜಾನೆ 4 ಗಂಟೆಗೆ ಓರ್ವ ಮಹಿಳೆ ಸೇರಿ ಒಟ್ಟು ಏಳು ಮಂದಿ ಲಕ್ಷ್ಮಣ್ ಅವರ ಮನೆಗೆ ಕಾರಿನಲ್ಲಿ ಬಂದಿದ್ದಾರೆ. ನಾವು ಐಟಿ ಅಧಿಕಾರಿಗಳು ಎಂದು ಹೇಳಿ ಮನೆಯಲ್ಲಿದ್ದ ಹಾಸುಕಲ್ಲು ಕಿತ್ತೆಸೆದಿದ್ದಾರೆ. ಅಲ್ಲದೆ ಬ್ಯಾಗ್, ಪೆಟ್ಟಿಗೆಗಳನ್ನೆಲ್ಲ ಕಿತ್ತು ಜಾಲಾಡಿದ್ದಾರೆ. 12,500 ರೂಪಾಯಿ ಹಾಗೂ ಮೂರು ಮೊಬೈಲ್ಗಳೊಂದಿಗೆ ಹೋಗುವಾಗ ಬೆಳಗಾವಿ ತೆರಿಗೆ ಇಲಾಖೆ ವಿಳಾಸ ಕೊಟ್ಟು, ಅಲ್ಲಿಗೆ ಬಂದು ಭೇಟಿಯಾಗಿ ಎಂದು ತಿಳಿಸಿ ಹೋಗಿದ್ದರು.
ಅದನ್ನು ನಂಬಿ ತೆರಿಗೆ ಇಲಾಖೆ ಕಚೇರಿಗೆ ಹೋದ ಲಕ್ಷ್ಮಣ್ ಅವರಿಗೆ ಶಾಕ್ ಕಾದಿತ್ತು. ನಾವ್ಯಾರೂ ಅಂತದ್ದೊಂದು ದಾಳಿ ನಡೆಸಲೇ ಇಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಆಗಲೇ ಇದೊಂದು ವಂಚನೆ ಪ್ರಕರಣ ನಡೆದಿದ್ದು ಬೆಳಕಿಗೆ ಬಂದಿದೆ.
ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.