ಹೊಸಪೇಟೆ: ಇದು ಮನೆಯಲ್ಲೇ ವ್ಯಾಪಾರ ಮಾಡುವ ಮಹಿಳೆಯರಿಗೆ ಒಂದು ಎಚ್ಚರಿಕೆಯ ಸಂದೇಶ ಎಂದರೂ ತಪ್ಪಾಗಲಾರದು. ಮನೆಯಿಂದಲೇ ಏನಾದರೂ ಒಂದಷ್ಟು ದುಡಿಯೋಣ ಎಂದುಕೊಂಡು ಯಾವುದಾದರೂ ವ್ಯಾಪಾರ ಮಾಡುತ್ತಿದ್ದರೆ, ಖರೀದಿಗೆಂದು ಬರುವವರ ಬಗ್ಗೆ ಒಂದು ಜಾಗರೂಕತೆಯಿಂದಲೇ ವ್ಯವಹರಿಸಿ.
ಇಲ್ಲೊಂದು ಕಡೆ ಮನೆಯಲ್ಲೇ ಸೀರೆ ವ್ಯಾಪಾರ ಮಾಡುತ್ತಿದ್ದಲ್ಲಿಗೆ ಖರೀದಿಗೆಂದು ಬಂದವರು, ಮನೆಯಲ್ಲಿ ದರೋಡೆ ಮಾಡಿಕೊಂಡು ಹೋಗಿದ್ದಲ್ಲದೆ ವೃದ್ಧೆಯೊಬ್ಬರನ್ನು ಕೊಲೆ ಕೂಡ ಮಾಡಿ ಹೋಗಿದ್ದಾರೆ. ಖರೀದಿದಾರರ ಸೋಗಿನಲ್ಲಿ ಬಂದಿದ್ದ ಆಗಂತುಕರು ಮನೆಯಲ್ಲಿದ್ದ ವೃದ್ಧೆಯ ಕೈಕಾಲು ಕಟ್ಟಿ ಕೂಡಿ ಹಾಕಿ ಹೊಡೆದಿದ್ದಲ್ಲದೆ ಕೊಲೆಯನ್ನೂ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ರಾಣಿಪೇಟೆ ಎಂಬಲ್ಲಿ ಇಂಥದ್ದೊಂದು ದುರ್ಘಟನೆ ಸಂಭವಿಸಿದೆ. ಅದರಲ್ಲೂ ಹೊಸಪೇಟೆಯ ಹೃದಯ ಭಾಗದಲ್ಲಿರುವ ರಾಣಿಪೇಟೆ ಪ್ರದೇಶಲ್ಲಿ ಹೀಗೊಂದು ಪ್ರಕರಣ ನಡೆದಿರುವುದು ಸುತ್ತಮುತ್ತಲಿನ ಜನರನ್ನು ಬೆಚ್ಚಿ ಬೀಳಿಸಿದೆ. ಸ್ಥಳಕ್ಕೆ ವಿಜಯನಗರ ಎಸ್ಪಿ ಡಾ. ಕೆ.ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಗೀಡಾಗಿರುವ ವೃದ್ಧೆ ಭುವನೇಶ್ವರಿ (68) ಎಂಬವರು ಮನೆಯಲ್ಲೇ ಸೀರೆ ವ್ಯಾಪಾರ ಮಾಡುತ್ತಿದ್ದರು. ಅಲ್ಲಿಗೆ ಇಬ್ಬರು ಮಹಿಳೆಯರ ಸಹಿತ ಆರು ಮಂದಿ ಖರೀದಿದಾರರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮುಂದಿನ ಬಾಗಿಲ ಮೂಲಕ ಪ್ರವೇಶಿಸಿದ ಈ ದುಷ್ಕರ್ಮಿಗಳು, ಮನೆಯ ಕಿಟಕಿ-ಬಾಗಿಲು ಬಂದ್ ಮಾಡಿ, ಕೊಲೆಗೈದು ದರೋಡೆ ಮಾಡಿಕೊಂಡ ಬಳಿಕ ಹಿಂದಿನ ಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ಇನ್ನೊಬ್ಬರು ನಾಗಭೂಷಣಮ್ಮ ಎಂಬವರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಪೊಲೀಸ್ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
600 ಮೆಟ್ಟಿಲು ಹತ್ತಿ ದೇವಿಯ ಹರಕೆ ತೀರಿಸಿದ ಭಕ್ತ, ಕೆಲವೇ ನಿಮಿಷಗಳಲ್ಲಿ ಮರಳಿ ಬಾರದ ಲೋಕಕ್ಕೆ ತೆರಳಿದ!