ಹುಬ್ಬಳ್ಳಿ: ತಾಲೂಕಿನ ಶೆರೆವಾಡ ಬಳಿಯ ಫ್ಯಾಕ್ಟರಿಯೊಂದರಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಹಾನಿಯಾಗಿದೆ. 555 ಮಂಕಿ ಕಸಬರಗಿ ಹಾಗೂ ಸ್ವಚ್ಛತಾ ಪರಿಕರ ತಯಾರಿಕೆಯಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮೀಣ ಜನರಿಗೆ ಉದ್ಯೋಗ ನೀಡಿರುವ ವಿಭವ ಕೆಮಿಕಲ್ಸ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು ಆರು ತಾಸು ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆ ಹಾಗೂ ಹೊಗೆ ಆಕಾಶದೆತ್ತರಕ್ಕೆ ಚಾಚಿತ್ತು.
ಕರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಆರ್ಡರ್ ಇದ್ದ ನಿಮಿತ್ತ ಸ್ವಚ್ಛತಾ ಪರಿಕರ ತಯಾರಿಕೆಗಾಗಿ ರಾಸಾಯನಿಕಗಳನ್ನು ತಂದು ದಾಸ್ತಾನು ಮಾಡಲಾಗಿತ್ತು. ಹೇಗೋ ಹೊತ್ತಿಕೊಂಡ ಬೆಂಕಿ ಈ ರಾಸಾಯನಿಕಗಳಿಗೆ ಹಬ್ಬಿದಾಗ ಬಹುಬೇಗ ಕೆನ್ನಾಲಿಗೆ ಚಾಚಿತು. ಅಲ್ಲಿಂದ, ಕಸಬರಗಿ ತಯಾರಿಕೆಗೆ ಬಳಸುವ ಹುಲ್ಲು ಕಡ್ಡಿಗಳಿದ್ದ ಗೋದಾಮಿನ ಮೊದಲ ಮಹಡಿಗೂ ಬೆಂಕಿ ಪಸರಿಸಿ, ಲಕ್ಷಾಂತರ ರೂ. ಮೌಲ್ಯದ ಕಚ್ಚಾವಸ್ತು ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ಮಧ್ಯಾಹ್ನ 3.30ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡು, ಕೆಲವೇ ಕ್ಷಣದಲ್ಲಿ ವ್ಯಾಪಿಸಿತು. ಕೂಡಲೇ ಕಾರ್ಖಾನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ: ಸುಪ್ರಸಿದ್ಧ ವಕೀಲ ಹರೀಶ್ ಸಾಳ್ವೆ ಎರಡನೆಯ ಮದುವೆಯ ಸಂತಸದಲ್ಲಿ…
ಹುಬ್ಬಳ್ಳಿಯಿಂದ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ನಗರ ಶಾಖೆಯ ಎರಡು ಸೇರಿ ಒಟ್ಟು ನಾಲ್ಕು ಅಗ್ನಿಶಾಮಕ ದಳದ ವಾಹನಗಳು ನಿರಂತರ ಕಾರ್ಯಾಚರಣೆ ನಡೆಸಿದವು. ಆದಾಗ್ಯೂ ಬೆಂಕಿ ನಿಯಂತ್ರಣಕ್ಕೆ ಬಾರದಿದ್ದಾಗ ಹೆಚ್ಚಿನ ಜಲಪಿರಂಗಿ ವಾಹನಗಳನ್ನು ತರಿಸಿಕೊಳ್ಳಲಾಯಿತು. 20ಕ್ಕೂ ಹೆಚ್ಚು ವಾಹನಗಳನ್ನು ಬಳಸಿ ಹಲವು ಮಂದಿ ಅಗ್ನಿಶಾಮಕರು ಭಾರಿ ಪ್ರಯಾಸದ ಕಾರ್ಯಾಚರಣೆ ನಡೆಸಿ ರಾತ್ರಿ 9ರ ಸುಮಾರಿಗೆ ಬೆಂಕಿಯನ್ನು ತಹಬಂದಿಗೆ ತಂದರು.
ಇದನ್ನೂ ಓದಿ: ಮನುಷ್ಯರ ವೃಷಣ ಕತ್ತರಿಸಿ ಹಸಿಹಸಿ ತಿನ್ನುವ ‘ವೈದ್ಯರು’ ಇವರು! ಫ್ರಿಜ್ನಲ್ಲಿತ್ತು ಭಯಾನಕ ಸತ್ಯ…
ಆದಾಗ್ಯೂ ಫ್ಯಾಕ್ಟರಿಯ ಕೆಲವು ಭಾಗದಲ್ಲಿ ಹಬ್ಬಿರುವ ಬೆಂಕಿ ನಂದಿಸುವುದು ಬಾಕಿ ಇತ್ತು. ಆ ಭಾಗದ ಸಮೀಪಕ್ಕೆ ಹೋಗುವುದು ಕಷ್ಟವೆನಿಸಿತು. ಕೊನೆಗೆ ಜೆಸಿಬಿ ಯಂತ್ರ ಬಳಸಿ ಒಂದು ಬದಿಯ ಗೋಡೆಯನ್ನು ಕೆಡವಿ, ಜಲಪಿರಂಗಿ ಸಿಡಿಸಬೇಕಾಯಿತು ಎಂದು ತಿಳಿದುಬಂದಿದೆ. ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ರಮೇಶ ಗೋಕಾಕ ಹಾಗೂ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ನೆರವಾದರು. ವಿಭವ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್. ನಂದಕುಮಾರ ಹಾಗೂ ಇತರರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಪತ್ರಿಕೆಗೆ ಪ್ರತಿಕ್ರಿಯಿಸಿದ ನಂದಕುಮಾರ ಅವರು, ಬೆಂಕಿ ಹೇಗೆ ಹೊತ್ತಿಕೊಂಡಿತು ಎಂದು ಗೊತ್ತಾಗಿಲ್ಲ. ಭಾರಿ ಹಾನಿಯಾಗಿದೆ. ಒಟ್ಟು ಹಾನಿಯ ಅಂದಾಜು ಇನ್ನಷ್ಟೇ ನಡೆಯಬೇಕಿದೆ ಎಂದು ತಿಳಿಸಿದರು.
ಹಾಥರಸ್ ಕೇಸ್: ಅಲಹಾಬಾದ್ ಹೈಕೋರ್ಟ್ ನಿಗಾದಲ್ಲಿ ನಡೆಯಲಿದೆ ಸಿಬಿಐ ತನಿಖೆ ಎಂದ ಸುಪ್ರೀಂ ಕೋರ್ಟ್