ಬೆಂಗಳೂರು: ಕರೊನಾ ಲಾಕ್ಡೌನ್ ಪರಿಣಾಮವಾಗಿ ಕೋರ್ಟ್ ಕಲಾಪಗಳು ಬಹುತೇಕ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ಎಲ್ಲ ವಕೀಲರಿಗೆ ಧನಸಹಾಯ ನೀಡುವಂತೆ ಕರ್ನಾಟಕ ವಕೀಲರ ಪರಿಷತ್ಗೆ ಹೈಕೋರ್ಟ್ ಸೂಚಿಸಿದೆ.
ವಕೀಲ ಎಚ್.ಸಿ. ಶಿವರಾಮು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಧನಸಹಾಯ ನೀಡುವಾಗ ಆರ್ಥಿಕ ಸ್ಥಿತಿಯನ್ನು ಮಾತ್ರ ಪರಿಗಣಿಸಿ, ವಯೋಮಿತಿ ಪರಿಗಣಿಸಬೇಡಿ ಎಂದೂ ಸೂಚಿಸಿದೆ.
ಇದನ್ನೂ ಓದಿ ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!
ಅರ್ಜಿಯ ವಿಚಾರಣೆ ವೇಳೆ ಪರಿಷತ್ ಪರ ವಕೀಲರು, ಲಾಕ್ಡೌನ್ ಹಿನ್ನೆಲೆಯಲ್ಲಿ ಹಣದ ಅಗತ್ಯವಿರುವ ವಕೀಲರಿಗೆ ನೆರವು ನೀಡಲು ಪರಿಷತ್ 2 ಕೋಟಿ ನೀಡಲಿದ್ದು, ಭಾರತೀಯ ವಕೀಲರ ಪರಿಷತ್ 45 ಲಕ್ಷ ಹಣ ನೀಡಿದೆ. ಹಿರಿಯ ವಕೀಲರಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಮಹಿಳಾ ವಕೀಲರ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅದನ್ನು ಪರಿಗಣಿಸಿದ ಪೀಠ, 10 ವರ್ಷದವರೆಗೆ ವೃತ್ತಿ ಅನುಭವ ಹೊಂದಿದ್ದು, ಸದ್ಯ ಹಣದ ಸಹಾಯ ಅಗತ್ಯ ವಕೀಲರಿಗೆ ಆರ್ಥಿಕ ನೆರವು ನೀಡಲು ಪರಿಷತ್ ನಿರ್ಧರಿಸಿದೆ. ಆದರೆ, ವಯೋಮಿತಿಯಿಲ್ಲದೆ ಹಣದ ಅಗತ್ಯವಿರುವ ಎಲ್ಲ ವಕೀಲರಿಗೆ ಆರ್ಥಿಕ ನೆರವು ನೀಡಬೇಕು ಎಂದು ಪೀಠ ಹೇಳಿತು.
ಇದನ್ನೂ ಓದಿ ಅಮೆರಿಕದ ಶ್ವೇತಭವನದಲ್ಲಿ ಮೊಳಗಿತು ವೇದ ಮಂತ್ರ ಘೋಷ- ಪುರೋಹಿತರ ಆಹ್ವಾನಿಸಿದ ಟ್ರಂಪ್
ಅಡ್ವೋಕೇಟ್ ಜನರಲ್, ಹಿರಿಯ ವಕೀಲರೊಂದಿಗೆ ಸಭೆ ನಡೆಸಿ ದೇಣಿಗೆ ಸಂಗ್ರಹಿಸಬೇಕು. ರಾಜ್ಯ ವಕೀಲರ ಪರಿಷತ್ ಹಾಗೂ ಭಾರತೀಯ ವಕೀಲರ ಪರಿಷತ್ ನೀಡುವ ಹಣವೂ ಸೇರಿ ಒಟ್ಟು ಸಂಗ್ರಹವಾದ ಮೊತ್ತದಿಂದ ವಕೀಲರಿಗೆ ಆರ್ಥಿಕ ನೆರವು ನೀಡಬೇಕು ಎಂದು ಸೂಚಿಸಿತು.
ವಕೀಲರ ಅರ್ಥಿಕ ನೆರವಿಗಾಗಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಕೀಲರ ಪರಿಷತ್ ಹಾಗೂ ಕೇಂದ್ರ ಸರ್ಕಾರಕ್ಕೆ ಭಾರತೀಯ ವಕೀಲರ ಪರಿಷತ್ ಮನವಿ ಸಲ್ಲಿಸಬೇಕು. ಆ ಮನವಿಯನ್ನು ಸರ್ಕಾರಗಳು ಪರಿಗಣಿಸಬೇಕು ಎಂದು ಇದೇ ವೇಳೆ ಹೈಕೋರ್ಟ್ ಸೂಚಿಸಿತು.
PHOTOS: ಕರೊನಾ ವೈರಸ್ ಇದ್ರೆ ಕೂಡ್ಲೇ ತಿಳಿಸುತ್ತಂತೆ ಈ ಸ್ಮೆಲ್ ಕ್ಯಾಮೆರಾ…!