ಚಿಕ್ಕಮಗಳೂರು: ಶೈಕ್ಷಣಿಕ ವರ್ಷದ ಧನ ಸಹಾಯದ ಅರ್ಜಿ ಪರಿಶೀಲಿಸಲು ಖಾಸಗಿಯವರಿಗೆ ನೀಡಿರುವ ಆದೇಶ ರದ್ದುಪಡಿಸಿ, ಕಾರ್ಮಿಕ ಮಂಡಳಿಯೇ ಅರ್ಹ ಫಲಾನುಭವಿಗಳಿಗೆ ಧನ ಸಹಾಯದ ಮೊತ್ತ ಜಮಾ ಮಾಡಬೇಕು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕರ್ತರು ಎಡಿಸಿ ನಾರಾಯಣ ಕನಕರಡ್ಡಿ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಕೂಡಲೇ ಶೈಕ್ಷಣಿಕ ಧನಸಹಾಯ ಮಂಜೂರಾತಿ ಮಾಡಿ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸಿಕೊಡಬೇಕು. ಕಟ್ಟಡ ಕಾರ್ಮಿಕರಿಗೆ ನಿವೇಶನ ಪಡೆದುಕೊಳ್ಳಲು ಕಾರ್ಮಿಕರ ಮಂಡಳಿಯಿಂದ ಪ್ರೋತ್ಸಾಹಧನ ನೀಡಬೇಕು. ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಐದು ಲಕ್ಷ ರೂಪಾಯಿವರೆಗೆ ಸಹಾಯ ಧನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲ ನರ್ಸಿಂಗ್ ಹೋಂಗಳಲ್ಲಿ ಫಲಾನುಭವಿಗಳು ತುರ್ತು ಚಿಕಿತ್ಸೆ ಪಡೆದರೆ ವೈದ್ಯಕೀಯ ವೆಚ್ಚ ನೀಡಬೇಕು.ತಪಾಸಣೆ ವೇಳೆ ಪತ್ತೆಯಾಗುವ ರೋಗಗಳಿಗೆ ಉನ್ನತ ಚಿಕಿತ್ಸೆ ಪಡೆಯಲು ನಗದು ರಹಿಗ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನೈಜ ಕಟ್ಟಡ ಕಾರ್ಮಿಕರಲ್ಲದವರ ಕಾರ್ಡ್ಗಳನ್ನು ಕೂಡಲೇ ಪರಿಶೀಲನೆ ನಡೆಸಿ ರದ್ದುಪಡಿಸಬೇಕು. ಕಾರ್ಮಿಕರ ನೋಂದಣಿಯನ್ನು ಕಾರ್ಮಿಕ ಇಲಾಖೆ ಮೂಲಕ ಮಾಡಿದರೆ ಅನುಕೂಲವಾಗುವ ಜತೆಗೆ ಬೋಗಸ್ ಕಾರ್ಡ್ ತಡೆಗಟ್ಟಬಹುದು ಎಂದರು.
ಸಂಘದ ತಾಲೂಕು ಅಧ್ಯಕ್ಷ ಸಿ.ವಸಂತಕುಮಾರ್, ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ಸದಸ್ಯರಾದ ಸಲೀಂ, ಗಣೇಶ್ ಮತ್ತಿತರರಿದ್ದರು.