ನವದೆಹಲಿ: ಹೌದಪ್ಪಾ… ನನ್ನ ಬಜೆಟ್ ಭಾಷಣ ತುಂಬ ಉದ್ದ ಆಯಿತೆಂದು ಒಪ್ಪುತ್ತೇನೆ. ಆದರೆ ಆಯವ್ಯಯದಲ್ಲಿ ಯುವಜನರ ವಿಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಹುಲ್ ಗಾಂಧಿ ಅವರ ಟೀಕೆಗೆ ಪ್ರತ್ಯುತ್ತರಿಸಿದ್ದಾರೆ.
ಬಜೆಟ್ನಲ್ಲಿ ಯುವಜನರಿಗೆ ಸಂಬಂಧ ಪಟ್ಟ ಯೋಜನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಈ ಯೋಜನೆಗಳಿಂದ ಯುವಜನರಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.
ಈ ಮೊದಲು ಬಜೆಟ್ನ ಭಾಷಣ ಮುಗಿದ ನಂತರ ಸಂಸತ್ನ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದು ಭಾರತದ ಬಜೆಟ್ ಇತಿಹಾಸದಲ್ಲೇ ಅತಿ ಉದ್ದವಾದ ಬಜೆಟ್ ಭಾಷಣ ಎಂದು ಟೀಕಿಸಿದ್ದರು.
ಭಾರತದಲ್ಲಿ ನಿರುದ್ಯೋಗವೇ ಪ್ರಮುಖ ಸಮಸ್ಯೆಯಾಗಿದೆ. ನಮ್ಮ ಯುವಕರು ಉದ್ಯೋಗ ಪಡೆಯಲು ನೆರವಾಗುವ ಯಾವುದೇ ಕಾರ್ಯತಂತ್ರ ಯೋಜನೆಯನ್ನು ಬಜೆಟ್ನಲ್ಲಿ ನೋಡಲಿಲ್ಲ. ಸರ್ಕಾರ ಬಜೆಟ್ ಅನ್ನು ಚೆನ್ನಾಗಿ ವಿವರಿಸಿದೆ. ಆದರೆ ಯುವಕರಿಗೆ ಉಪಯೋಗವಾಗುವುದು ಏನೂ ಇಲ್ಲ ಎಂದಿದ್ದರು.
ಇದನ್ನೂ ಓದಿ: ಕೇಂದ್ರ ಬಜೆಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದು ಹೀಗೆ…
ಹಿಂದಿನ ಬಜೆಟ್ ಅಂಶವನ್ನೇ ಮತ್ತೆ ಹೇಳಲಾಗಿದೆ. ಇದು ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ. ಎಲ್ಲವೂ ಕೂಡ ಕೇವಲ ಮಾತಾಗಿದ್ದು, ಯಾವುದು ಕೂಡ ಜಾರಿಯಾಗುವುದಿಲ್ಲ ಎಂದು ಟೀಕಿಸಿದ್ದರು. (ಏಜೆನ್ಸೀಸ್)