ಬೆಂಗಳೂರು: ಎಂ.ಜಿ. ರಸ್ತೆಯಲ್ಲಿ ಪ್ಯಾಲೆಸ್ಟೈನ್ಗೆ ಬೆಂಬಲ ವ್ಯಕ್ತಪಡಿಸಿ ಸೋಮವಾರ ಪ್ರತಿಭಟನೆ ನಡೆಸಿದವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಬ್ಬನ್ ಪಾರ್ಕ್ ಪೊಲೀಸರು, ಸ್ವಯಂ ದೂರು ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 188 ಸರ್ಕಾರಿ ಆದೇಶ ಉಲ್ಲಂಘನೆ, 283ರ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ, 290, 291 ಸಾರ್ವಜನಿಕರಿಗೆ ತೊಂದರೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳಾದ ವಿನಯ್ ಶ್ರೀನಿವಾಸ್, ಡಾ.ಬಾನು ಪ್ರಕಾಶ್, ಹಾದ್ ಖಾನ್, ಇಮ್ರಾನ್, ಮಹಮ್ಮದ್ ಅಶ್ವಸ್, ಸೈಯದ್ ಅಬ್ಬಾಸ್, ಲಿಯೋಜಾನ್, ಮಹಮ್ಮದ್ ಸೈುದ್ದೀನ್, ಮಹಮ್ಮದ್ ಇಸ್ಮಾಯಿಲ್, ಶೋಹೆಬ್, ಉಮರ್ ಸೇರಿದಂತೆ 25ಕ್ಕೂ ಅಧಿಕ ಮಂದಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹುತ್ವ ಕರ್ನಾಟಕ ಸಂಘಟನೆ ಹೆಸರಿನಲ್ಲಿ ವಾಟ್ಸ್ಆ್ಯಪ್ನಲ್ಲಿ ಪ್ಯಾಲೆಸ್ಪೈನ್ಗೆ ಬೆಂಬಲಿಸಿ ಎಂ.ಜಿ. ರಸ್ತೆಯಲ್ಲಿ ಸೇರುವಂತೆ ಕರೆ ನೀಡಿದ್ದರು.
ಸೋಮವಾರ ಸಂಜೆ ಏಕಾಏಕಿ ನೂರಾರು ಮಂದಿ ಜಮಾಯಿಸಿ ಪ್ಯಾಲೆಸ್ಪೈನ್ ಪರ ಮತ್ತು ಇಸ್ರೇಲ್ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದ್ದರು. ಹೈಕೋರ್ಟ್ ಆದೇಶದಂತೆ ಪ್ರತಿಭಟನೆ ನಡೆಸಲು ಅನುಮತಿ ಪಡೆದಿರಲಿಲ್ಲ. ಫ್ರೀಡಂ ಪಾರ್ಕ್ ಹೊರತು ಪಡಿಸಿದರೇ ಉಳಿದ ಯಾವುದೇ ಸ್ಥಳದಲ್ಲಿ ಪ್ರತಿಭಟನೆ, ಧರಣಿ ನಡೆಸದಂತೆ ಆದೇಶ ಇದ್ದರೂ ಕಾನೂನು ಉಲ್ಲಂಸಿ ಎಂ.ಜಿ.ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಸರ್ಕಾರದ ಆದೇಶ ಉಲ್ಲಂಘನೆಯಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಫ್ಲಾಶ್ ಮಾಬ್ :
ಜಗತ್ತಿನ ಎಲ್ಲೆಡೆ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್ಆ್ಯಪ್ನಲ್ಲಿ ಫ್ಲಾಶ್ ಮಾಬ್ ನಡೆಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಏಕಾಏಕಿ ಒಂದೇಡೆ ಜಮಾಯಿಸಿ ಪ್ರದರ್ಶನ ಮಾಡುವುದು.
ಪ್ಯಾಲೆಸ್ಪೈನ್ನಲ್ಲಿ ಶಾಂತಿ ಕಾಪಾಡಬೇಕೆಂದು ಬೆಂಬಲಿಸಿ ಕೆಲವರು ವಾಟ್ಸ್ಆ್ಯಪ್ನಲ್ಲಿ ಫ್ಲಾಶ್ ಮಾಬ್ನಲ್ಲಿ ಏಕಾಏಕಿ ಎಂ.ಜಿ.ರಸ್ತೆಯಲ್ಲಿ ಜಮಾಯಿಸಿದ್ದರು. ಮುಂಜಾಗೃತ ಕ್ರಮವಾಗಿ 25ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.