ಗ್ರೇಟರ್ ನಾಯ್ಡ: ರೈಲ್ವೆ ಟಿಕೆಟ್ ರದ್ದು ಮಾಡಿಸಿದಾಗ 300 ರೂಪಾಯಿ ಕ್ಯಾನ್ಸಲೇಷನ್ ಚಾರ್ಜ್ ಪಡೆದ ಎಂಬ ಕಾರಣಕ್ಕೆ ಆರಂಭವಾದ ಜಗಳದಲ್ಲಿ ಅಂಗಡಿ ಮಾಲಿಕನ ಮೇಲೆ ಕಾರು ಹಾಯಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಉತ್ತರಪ್ರದೇಶದ ಗೌತಮಬುದ್ಧನಗರ ಜಿಲ್ಲೆಯ ಗ್ರೇಟರ್ ನಾಯ್ಡ ಪ್ರದೇಶದಲ್ಲಿ ನಡೆದ ಈ ಅಪರಾಧದ ಸಂಬಂಧವಾಗಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದರೆ, ಮತ್ತೊಬ್ಬನ ಪತ್ತೆ ಕಾರ್ಯ ನಡೆದಿದೆ.
ಘರ್ಬಾರಾ ಗ್ರಾಮದ ನಿವಾಸಿಗಳಾದ ನಕುಲ್ ಸಿಂಗ್(30) ಮತ್ತು ಅರುಣ್ ಸಿಂಗ್(28) ಸೋದರರು, ಗ್ರಾಮದಲ್ಲಿ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡು ಸ್ಥಳೀಯರಿಗೆ ರೈಲ್ವೆ ಟಿಕೆಟ್ ಬುಕಿಂಗ್ ಸೇವೆ ಒದಗಿಸುತ್ತಿದ್ದ 30 ವರ್ಷದ ನಿತಿನ್ ಶರ್ಮಾನನ್ನು ಕೊಲೆ ಮಾಡಿರುವ ಆರೋಪ ದಾಖಲಾಗಿದೆ. ಕಳೆದ ಐದು ವರ್ಷಗಳಿಂದ ಈ ಅಂಗಡಿ ನಡೆಸುತ್ತಿದ್ದ ಮೃತ ನಿತಿನ್ ಶರ್ಮಾಗೆ ಹೆಂಡತಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಬಾಗಲಕೋಟೆ ಮೂಲದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಎರಡು ವಾರಗಳ ಹಿಂದೆ ನಕುಲ್ ಸಿಂಗ್ ಜಮ್ಮುಗೆ ಒಂದು ರೈಲ್ವೇ ಟಿಕೆಟ್ ಬುಕ್ ಮಾಡಿದ್ದ. ನಂತರ ಕ್ಯಾನ್ಸಲ್ ಮಾಡಿಸಿದ್ದ. ನಿತಿನ್ ಅವನ ಟಿಕೆಟ್ ಹಣವನ್ನು 300 ರೂ. ಕ್ಯಾನ್ಸಲೇಷನ್ ಚಾರ್ಜ್ ಕಟ್ ಮಾಡಿಕೊಂಡು ಹಿಂದಿರುಗಿಸಿದ್ದ ಎನ್ನಲಾಗಿದೆ. ಸೋಮವಾರ, ನಕುಲ್ ಮತ್ತು ಅರುಣ್ ನಿತಿನ್ ಅಂಗಡಿಗೆ ಬಂದು 300 ರೂ. ಕೊಡುವಂತೆ ಕೇಳಿದ್ದು, ವಾಗ್ವಾದ ಉಂಟಾಗಿದೆ ಎಂದು ನಿತಿನ್ ತನ್ನ ಚಿಕ್ಕಪ್ಪ ಮೆಹೆರ್ಚಂದ್ಗೆ ಕರೆ ಮಾಡಿದ. ಅವರು ಅಂಗಡಿಗೆ ಹೋಗುವಷ್ಟರಲ್ಲಿ, ನಿತಿನ್ ಅಂಗಡಿಯಾಚೆ ನಿಂತಿದ್ದ. ಆರೋಪಿಗಳಿಬ್ಬರು ಕೋಪದಿಂದ ತಮ್ಮ ಮಾರುತಿ ಸ್ವಿಫ್ಟ್ ಕಾರಿನೊಳಕ್ಕೆ ಹತ್ತಿ ಕಾರನ್ನು ನಿತಿನ್ ಮೇಲೆ ಹಾಯಿಸಿದ್ದಲ್ಲದೆ, 2-3 ಬಾರಿ ಅವನ ಮೇಲೇ ರಿವರ್ಸ್ ಗೇರಲ್ಲಿ ಓಡಿಸಿದರು. ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ನಿತಿನ್ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆತ ಚಿಕಿತ್ಸೆ ಫಲಿಸದೆ ಮೃತಪಟ್ಟ ಎಂದು ನಿತಿನ್ ತಂದೆ ಸತ್ವೀರ್ ಶರ್ಮಾ ಸಲ್ಲಿಸಿರುವ ದೂರಿನಲ್ಲಿ ಹೇಳಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರೇಟರ್ ನಾಯ್ಡಾದ ಎಕೋಟೆಕ್-1 ಠಾಣೆ ಪೊಲೀಸರು, ಘಟನಾ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಗಳ ಹುಡುಕಾಟ ಆರಂಭಿಸಿದರು. ಮಂಗಳವಾರ ನಕುಲ್ ಕಾರಿನಲ್ಲಿ ಹೋಗುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದಾನೆ. ಅವನನ್ನು ಬಂಧಿಸಿ, ಕೃತ್ಯದಲ್ಲಿ ಬಳಸಲಾದ ಕಾರನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಅರುಣ್ ಸಿಂಗ್ನ ಪತ್ತೆ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)
ಶಾಲಾ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ-ಶಿಕ್ಷಕರಿಂದ ಗ್ಯಾಂಗ್ರೇಪ್; ಶಿಕ್ಷಕಿಯರು ವಿಡಿಯೋ ಮಾಡುತ್ತಿದ್ದರು!