ಪುತ್ತೂರು: ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ನೀಡಲಾಗುತ್ತಿದೆ. ದರ ಏರಿಕೆ ತಹಬಂದಿಗೆ ಬಾರದಿದ್ದರೆ, ಅನಿವಾರ್ಯತೆ ಬಂದರೆ ಸಬ್ಸಿಡಿ ಹೆಚ್ಚಳದ ಬಗೆಗೂ ಗಮನ ಹರಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ರಾಸಾಯನಿಕ ಗೊಬ್ಬರದ ಧಾರಣೆ ಏರುತ್ತಿದೆ. ರೈತರ ಹಿತರಕ್ಷಣೆಗಾಗಿ ಧಾರಣೆ ಸ್ಥಿರತೆ ಸಾಧಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ದಾಸ್ತಾನುನಿರುವ ಗೊಬ್ಬರವನ್ನು ಹಳೆಯ ದರದಲ್ಲೇ ಮಾರಾಟ ಮಾಡುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ. ಡಿಪಿಎ, ಎನ್ಪಿಕೆ ಮುಂತಾದ ವರ್ಗದ ರಾಸಾಯನಿಕ ರಸಗೊಬ್ಬರಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಪಟ್ಟು ಹೆಚ್ಚಿದೆ. ಶೇ.90ರಷ್ಟು ರಸಗೊಬ್ಬರಕ್ಕೆ ನಾವು ವಿದೇಶಗಳನ್ನೇ ಅವಲಂಬಿಸಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸದ ಬಿಸಿ ನಮಗೂ ತಟ್ಟುತ್ತದೆ ಎಂದರು.