ಚಂಡೀಗಢ: ಇದು ಲೈಂಗಿಕ ಕಿರುಕುಳಕ್ಕೆ ಒಳಗಾದ ಯುವತಿಯೊಬ್ಬಳ ಅಪ್ಪನ ಇಂಟರೆಸ್ಟಿಂಗ್ ಹಾಗೂ ಅಷ್ಟೇ ನೋವಿನ ಕಥೆ…
ಕಿರುಕುಳಕ್ಕೆ ಒಳಗಾದ ಯುವತಿ ಚಂಡೀಗಢದ ಪ್ರಸಿದ್ಧ ಟೆನ್ನಿಸ್ ಅಕಾಡೆಮಿಯಲ್ಲಿ ತರಬೇತಿಗೆ ಹೋಗಿದ್ದಳು. ಇವಳಿಗೆ ತರಬೇತು ನೀಡುತ್ತಿದ್ದುದು ಜ್ಯೂನಿಯರ್ ಡೇವಿಸ್ ಕಪ್ ಆಟಗಾರನೊಬ್ಬ ಸೇರಿದಂತೆ ಐವರು ತರಬೇತುದಾರರು. ಆದರೆ ಯುವತಿಗೆ ಟೆನ್ನೀಸ್ ಆಟದ ತರಬೇತಿ ನೀಡುವ ಬದಲು ಲೈಂಗಿಕವಾಗಿ ಕಿರುಕುಳ ಕೊಡಲು ಶುರು ಮಾಡಿದರು.
ಈ ಹಿಂಸೆಯನ್ನು ತಾಳದೇ ಯುವತಿ ಎಲ್ಲವನ್ನೂ ತನ್ನ ಅಪ್ಪನ ಎದುರು ಹೇಳಿದಳು. ಅಪ್ಪ ಪೊಲೀಸರಲ್ಲಿ ದೂರು ದಾಖಲು ಮಾಡಿದರು. ಪ್ರಕರಣ ಕೋರ್ಟ್ಗೆ ಹೋಯಿತು.
ಹೇಳಿ ಕೇಳಿ ಕೋರ್ಟ್ಗೆ ಬೇಕಿರುವುದು ಸಾಕ್ಷ್ಯಾಧಾರ ಅಷ್ಟೇ. ಈ ಬಗ್ಗೆ ಚೆನ್ನಾಗಿ ಅರಿತುಕೊಂಡಿರುವ ವಕೀಲನೊಬ್ಬ ಎಲ್ಲಾ ಆರೋಪಿಗಳೂ ಅಪ್ರಾಪ್ತರು ಎಂಬಂಥ ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್ಗೆ ನೀಡಿದ. ಟೆನ್ನಿಸ್ ಅಕಾಡಮಿಯಿಂದ ಈ ಜನನ ಪ್ರಮಾಣ ಪತ್ರ ನೀಡಲಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್, ಆರೋಪಿಗಳೆಲ್ಲರೂ ಅಪ್ರಾಪ್ತರು ಎನ್ನುವ ತೀರ್ಮಾನಕ್ಕೆ ಬಂದು ಜಾಮೀನು ಕೂಡ ನೀಡಿಬಿಟ್ಟಿತು!
ಇದನ್ನೂ ಓದಿ: ಕಾಗೆ ಹಿಕ್ಕೆ ಹಾಕಿತೆಂದು ಎರ್ರಾಬಿರ್ರಿ ಗುಂಡು ಹಾರಿಸಿದ್ದ ದುಬೆ!
ಈ ಆರೋಪಿಗಳನ್ನು ನೋಡಿದರೆ ಯಾರಾದರೂ ಹೇಳಿಯಾರು, ಅವರು ಪ್ರಾಪ್ತ ವಯಸ್ಕರು ಎಂದು. ತನ್ನ ಮಗಳಿಗೆ ಚಿತ್ರಹಿಂಸೆ ನೀಡಿರುವ ಈ ಆರೋಪಿಗಳಿಗೆ ಮೋಸದಿಂದ ಜಾಮೀನು ಸಿಕ್ಕಿದ್ದನ್ನು ಯುವತಿಯ ತಂದೆಗೆ ಅರಗಿಸಿಕೊಳ್ಳಲು ಆಗಲಿಲ್ಲ. ಹಾಗೆಂದು ಕಣ್ಣೀರು ಸುರಿಸುತ್ತಾ ಕುಳಿತುಕೊಳ್ಳಲಿಲ್ಲ ಇವರು.
ಸರಿ, ಆಗಿದ್ದು ಆಗಿಯೇ ಹೋಗಲಿ, ಮೋಸ ಗೆಲ್ಲುತ್ತದೆ, ಸತ್ಯ ಗೆಲ್ಲುತ್ತದೋ ಎಂದು ನೋಡಿಯೇ ಬಿಡುವ ಎಂದು ಎಲ್ಲಾ ಆರೋಪಿಗಳ ವಿಳಾಸಗಳನ್ನು ಅದ್ಹೇಗೋ ಪಡೆದುಕೊಂಡರು. ಎಲ್ಲಾ ಆರೋಪಿಗಳ ಅಸಲಿಯತ್ತು ಬಹಿರಂಗ ಪಡಿಸುವ ಗಟ್ಟಿ ಮನಸ್ಸು ಮಾಡಿಕೊಂಡು ಅವರವರ ಮೂಲ ವಿಳಾಸ ಹುಡುಕಿ ಹೊರಟೇ ಬಿಟ್ಟರು.
ರೋಹ್ಟಕ್, ಹರಿಯಾಣ, ಹಿಸ್ಸಾರ್ ಹಾಗೂ ಪಲ್ವಾಲ್ಗೆ ಅಲೆದಾಡಿದ ಈ ಅಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಅವರ ಕಷ್ಟಕ್ಕೆ ಬೆಲೆ ಸಿಕ್ಕಿತು. ಎಲ್ಲರ ಅಸಲಿ ಜನನ ಪ್ರಮಾಣ ಗಿಟ್ಟಿಸಿಕೊಂಡರು. ಪ್ರಮಾಣ ಪತ್ರದಲ್ಲಿ ಎಲ್ಲರೂ ಪ್ರಾಪ್ತ ವಯಸ್ಕರು ಎನ್ನುವುದು ಸಾಬೀತಾಗಿದೆ.
ಅದನ್ನು ಹಿಡಿದು ಇದೀಗ ಪುನಃ ಕೋರ್ಟ್ ಬಾಗಿಲು ತಟ್ಟಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರೂ ಶಾಮೀಲಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ, ಅವರು ಈ ಬಗ್ಗೆ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರಿಗೂ ದೂರು ನೀಡಿದ್ದಾರೆ. ಅಸಲಿ ದಾಖಲೆಗಳನ್ನು ನೋಡಿ ಕೋರ್ಟ್ ಏನು ತೀರ್ಪು ಕೊಡುತ್ತದೆ ಎಂಬುದಷ್ಟೇ ಈಗಿರುವ ಕುತೂಹಲ.