ಬೆಂಗಳೂರು: ಸರ್ಕಾರಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು ಸುದೀರ್ಘ ಕಾಲ ಕೆಲಸಕ್ಕೆ ಬರದೇ ಇದ್ದಿದ್ದರಿಂದ ವಜಾಗೊಂಡಿದ್ದರು. ಆದರೆ ಅಪ್ಪನಿಗೆ ಕೆಲ್ಸ ಕೊಡಿ ಎಂಬ ಇವರ ಪುಟ್ಟ ಪುತ್ರಿಯ ಕೋರಿಕೆಗೆ ಮರುಗಿದ ಹಿರಿಯ ಅಧಿಕಾರಿ, ಪುನಃ ಇವರನ್ನು ಉದ್ಯೋಗಕ್ಕೆ ತೆಗೆದುಕೊಂಡು, ಮುಂದೆ ಅಂಥ ತಪ್ಪು ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಹೀಗೆ ಅಪ್ಪನಿಗೆ ಮರಳಿ ಕೆಲಸ ಸಿಗುವಂತೆ ಮಾಡಿದ ಬಾಲಕಿಯ ಹೆಸರು ಭೂಮಿಕಾ. ಏಳೆಂಟು ವರ್ಷ ವಯಸ್ಸಿನ ಈ ಬಾಲಕಿ ವೈದ್ಯಕೀಯ ಲೋಪದಿಂದ ತನ್ನ ಎಡಗೈಯನ್ನು ಭಾಗಶಃ ಕಳೆದುಕೊಂಡಿದ್ದರೂ ಜೀವನೋತ್ಸಾಹವನ್ನು ಕಳೆದುಕೊಂಡಿಲ್ಲ. ಈ ಬಾಲಕಿಯ ತಂದೆ ಲೋಕೇಶ್, ಕೆಎಸ್ಆರ್ಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು, ದೀರ್ಘಾವಧಿಯ ಗೈರು ಪ್ರಕರಣದಲ್ಲಿ ಕೆಲಸದಿಂದ ವಜಾಗೊಳಿಸಲ್ಪಟ್ಟಿದ್ದರು. ಪರಿಣಾಮವಾಗಿ ತನ್ನ ಪುತ್ರಿಗೆ ಚಿಕಿತ್ಸೆ ಕೊಡಿಸಲಾಗದೆ, ಜೀವನ ನಡೆಸುವುದಕ್ಕೂ ಕಷ್ಟ ಪಡುತ್ತಿದ್ದರು.
ಹೀಗಾಗಿ ಲೋಕೇಶ್ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರನ್ನು ತನ್ನ ಪುತ್ರಿಯೊಂದಿಗೆ ಕಚೇರಿಗೆ ತೆರಳಿ ಭೇಟಿಯಾಗಿದ್ದರು. ಆಗ ವ್ಯವಸ್ಥಾಪಕ ನಿರ್ದೇಶಕರು, ಭೂಮಿಕಾಳನ್ನು ಮಾತನಾಡಿಸಿ ಚಾಕೋಲೇಟ್ ನೀಡಿದ್ದಲ್ಲದೆ ಅಪ್ಪನಿಗೆ ಕೆಲಸ ಕೊಡಬೇಕಾ? ಎಂದು ಕೇಳಿದರು. ಆಕೆ ನನ್ನ ಅಪ್ಪನಿಗೆ ಕೆಲಸ ಕೊಡಿ ಸರ್ ಎಂದು ಮುಗ್ಧತೆಯಿಂದ ಕೇಳಿದ್ದಕ್ಕೆ ಮರುಗಿದ ಅನ್ಬುಕುಮಾರ್, ಲೋಕೇಶ್ಗೆ ಮರಳಿ ಕೆಲಸ ಕೊಡಿಸಲು ವ್ಯವಸ್ಥೆ ಮಾಡಿದ್ದಾರೆ.
ಮರುನೇಮಕ ಮಾಡಿಕೊಳ್ಳಲು ಆದೇಶ ಮಾಡಿದ ಅನ್ಬುಕುಮಾರ್, ಪುಟ್ಟ ಮಗಳನ್ನು ನೋಡಿ ಮರಳಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಮತ್ತೊಮ್ಮೆ ಗೈರಾದರೆ ಯಾವುದೇ ವಿನಾಯಿತಿ ನೀಡದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕಾಶಿಯಾತ್ರೆಗೆ ತೆರಳಿದ್ದ ಕನ್ನಡಿಗರು ಅತಂತ್ರ; ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಯಾತ್ರಾರ್ಥಿಗಳು..
26 ವರ್ಷಗಳಲ್ಲೇ ಅತ್ಯಧಿಕ ಮಳೆ; ಒಂದೇ ದಿನದಲ್ಲಿ 972 ಮಿ.ಮೀ. ವರ್ಷಧಾರೆ..