ಕರ್ನಾಲ್: ಹರಿಯಾಣದ ಕರ್ನಾಲ್ನಲ್ಲಿ ಕಳೆದ ತಿಂಗಳು ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಬಗ್ಗೆ ಹರಿಯಾಣ ಸರ್ಕಾರ ಉನ್ನತ ತನಿಖೆ ಆದೇಶಿಸಿದೆ. ‘ಬ್ಯಾರಿಕೇಡ್ ದಾಟುವ ರೈತರ ತಲೆ ಒಡೆಯಿರಿ’ ಎಂದು ಆದೇಶಿಸಿ, ವಿವಾದದ ಕೇಂದ್ರಬಿಂದುವಾಗಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾರನ್ನು ಸರ್ಕಾರ ರಜೆಯ ಮೇಲೆ ಕಳುಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಗುಂಪು ಕರ್ನಾಲ್ ಜಿಲ್ಲೆಯ ಹೊರಗೆ ನಡೆಸುತ್ತಿದ್ದ ತನ್ನ ಪ್ರತಿಭಟನೆಯನ್ನು ಹಿಂಪಡೆದಿದೆ ಎನ್ನಲಾಗಿದೆ.
ಆಗಸ್ಟ್ 28 ರಂದು ಕರ್ನಾಲ್ನ ಘರೌಂದಾ ಟೋಲ್ ಪ್ಲಾಜಾದ ಬಳಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್ ನಡೆದಿತ್ತು. ಈ ಸಂದರ್ಭದಲ್ಲಿ 10 ರೈತರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವ ರೈತ ಮೃತಪಟ್ಟಿದ್ದ ಎಂದು ರೈತ ಮುಖಂಡರು ಆರೋಪಿಸಿದ್ದರು. ಇಂದು ಕರ್ನಾಲ್ನಲ್ಲಿ ರೈತ ಮುಖಂಡ ಗುರ್ನಾಮ್ ಸಿಂಗ್ ಚಾದುನಿ ಜೊತೆ, ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಿಂಗ್ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದರು.
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ
ಆಗಸ್ಟ್ 28 ರಂದು ನಡೆದ ಪೊಲೀಸರ ಲಾಠಿ ಚಾರ್ಜ್ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿರುವ ತನಿಖೆಯ ಸಮಯದಲ್ಲಿ, ಎಸ್ಡಿಎಂ ಆಯುಷ್ ಸಿನ್ಹಗೆ ಕಡ್ಡಾಯ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ ಎಂದು ದೇವೇಂದ್ರ ಸಿಂಗ್ ಹೇಳಿದರು. ಲಾಠಿ ಚಾರ್ಜ್ನಲ್ಲಿ ಮೃತಪಟ್ಟಿದ್ದ ಎನ್ನಲಾದ ಸುಶೀಲ್ ಕಾಜಲ್ ಎಂಬ ರೈತನ ಇಬ್ಬರು ಕುಟುಂಬದ ಸದಸ್ಯರಿಗೆ ನೌಕರಿಯನ್ನು ನೀಡಲಾಗುವುದು ಎಂದರು.
ತದನಂತರ ರೈತ ಮುಖಂಡ ಚಾದುನಿ ಮಾತನಾಡಿ, ಕರ್ನಾಲ್ ಜಿಲ್ಲಾ ಕೇಂದ್ರದ ಹೊರಗೆ ನಡೆಸುತ್ತಿರುವ ತಮ್ಮ ಧರಣಿ ಪ್ರತಿಭಟನೆಗೆ ಕೊನೆ ಹಾಡುವುದಾಗಿ ಹೇಳಿದರು. “ನಾವು ಎಫ್ಐಆರ್ ದಾಖಲಿಸಲು ಕೇಳಿದ್ದೆವು. ಆದರೀಗ ನ್ಯಾಯಾಧೀಶರ ತನಿಖೆ ಆದೇಶಿಸಲಾಗಿದೆ. ಇದು ಇನ್ನೂ ಉತ್ತಮ” ಎಂದರು. (ಏಜೆನ್ಸೀಸ್)