ನವದೆಹಲಿ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಭೂಸುಧಾರಣಾ ಕಾನೂನು ವಿರೋಧಿಸಿ ಸಾವಿರಾರು ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ.
ಭೂಸುಧಾರಣಾ ಕಾನೂನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲು ಹರಿಯಾಣದ ಸಾವಿರಾರು ರೈತರು ಇಂದು ಬೆಳಗ್ಗೆ ದೆಹಲಿಗೆ ಮೆರವಣಿಗೆ ಹೋಗುತ್ತಿದ್ದರು. ದೆಹಲಿಯ ಗಡಿಯಲ್ಲೇ ಅವರನ್ನು ತಡೆದು ವಾಪಸ್ಸು ಕಳುಹಿಸಲು ಪೊಲೀಸರು ಯತ್ನಿಸಿದ್ದು, ರೈತರ ಆಕ್ರೊಶಕ್ಕೆ ಕಾರಣವಾಗಿದೆ. ಇದರ ಪರಿಣಾಮ ಸೇತುವೆ ಮೇಲೆ ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳನ್ನು ನದಿಗೆ ಎಸೆದು, ಇಟ್ಟಿಗೆಯಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ.
ಪ್ರತಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ. ಆದರೆ, ಸಾಕಷ್ಟು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದು, ಹರಿಯಾಣದ ಹೊರವಲಯದ ಸೇತುವೆ ಮೇಲೆ ಒಟ್ಟಿಗೆ ಸೇರಿಕೊಂಡಿದ್ದು, ಅವರನ್ನು ವಾಪಸ್ಸು ಕಳುಹಿಸಲು ಪೊಲೀಸರು ಸಹ ಹರಸಾಹಸ ಪಡುತ್ತಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದ್ದು, ರೈತರನ್ನ ನಿಯಂತ್ರಿಸಲು ಭಾರಿ ಭದ್ರತೆಯನ್ನು ನಿಯೋಜಿಸಿದೆ. ರಾಜಧಾನಿಯಲ್ಲಿ ರೈತರು “ದೆಹಲಿ ಚಲೋ” ಚಳುವಳಿ ಹಮ್ಮಿಕೊಂಡಿದ್ದು, ಪಂಜಾಬ್ನಿಂದ ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಆಗಮಿಸುತ್ತಿದ್ದ ರೈತರನ್ನು ತಡೆಯಲು ಹರಿಯಾಣ ಸರ್ಕಾರ ಸಕಲ ಯತ್ನವನ್ನು ಮಾಡುತ್ತಿದೆ. ಆದರೆ, ರೈತರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ.
ಇದನ್ನೂ ಓದಿ: ಮಹಾರಾಣಿ ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಶಾಸಕನಿಗೆ ರೋಹಿಣಿ ಸಿಂಧೂರಿ ಟಾಂಗ್..!
ಸುಮಾರು 48 ಗಂಟೆಗಳಿಂದ ರೈತರ ತಡೆಗಾಗಿ ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳನ್ನು ನದಿಗೆ ಎಸೆದ ರೈತರು ತಮ್ಮ ಮೊದಲ ಜಯವನ್ನಾಗಿ ಆಚರಿಸಿದ್ದಾರೆ. ಬಾವುಟಗಳನ್ನು ಹಾರಿಸಿ, ಘೋಷಣೆಗೆ ಕೂಗಿ ಸೇತುವೆಯಿಂದ ವಾಪಸ್ಸು ಹೋಗಲು ನಿರಾಕರಿಸಿದ್ದಾರೆ.
ಉತ್ತರ ಪ್ರದೇಶ, ಹರಿಯಾಣ, ಉತ್ತರಖಂಡ, ರಾಜಸ್ಥಾನ, ಕೇರಳ ಮತ್ತು ಪಂಜಾಬ್ ರಾಜ್ಯಗಳ ರೈತರು ಸುಮಾರು ಎರಡು ತಿಂಗಳವರೆಗೆ ಪ್ರತಿಭಟನೆ ಮಾಡಲು ಯೋಜನೆ ರೂಪಿಸಿದ್ದಾರೆ. ರೈತರ ಆದಾಯ ಸುಧಾರಣೆಗಾಗಿ ಅವರು ಬೆಳೆದಂತಹ ಪದಾರ್ಥಗಳನ್ನು ದೇಶದ ಯಾವುದೇ ವಾಣಿಜ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿ ನೀಡಿ ಕೇಂದ್ರ ಸರ್ಕಾರ ನೂತನ ಭೂಸುಧಾರಣೆ ಕಾನೂನನ್ನು ಜಾರಿಗೆ ತಂದಿದೆ. ಆದರೆ, ಹೊಸ ಕಾನೂನು ನಮ್ಮ ಸಂಪಾದನೆಯನ್ನು ಕಸಿದುಕೊಂಡು ದೊಡ್ಡ ಚಿಲ್ಲರೆ ವ್ಯಾಪಾರಿಗಳಿಗೆ ಲಾಭ ಮಾಡಿಕೊಡುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿ ರೈತರು ರಸ್ತೆಗೆ ಇಳಿದಿದ್ದಾರೆ.
ಪ್ರತಿಪಕ್ಷಗಳು ಸಹ ನೂತನ ಕಾನೂನನ್ನು ವಿರೋಧಿಸಿದ್ದು, ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿಸುವುದನ್ನು ಸರ್ಕಾರ ನಿಲ್ಲಿಸಲು ಇದು ಕಾರಣವಾಗಬಹುದು. ಇದರಿಂದ ರೈತರಿಗೆ ಸರಿಯಾದ ಸಮಯದಲ್ಲಿ ಹಣ ದೊರೆಯುವ ಸಗಟು ಮಾರುಕಟ್ಟೆಗೆ ಅಡ್ಡಿಯಾಗಲಿದೆ ಎಂದು ಹೇಳಿದೆ. ಆದರೆ, ನೂತನ ಕಾನೂನಿಂದ ರೈತರಿಗೆ ಒಳ್ಳೆಯದಾಗಲಿದೆ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ಸರ್ಕಾರ ಭರವಸೆ ನೀಡಿದೆ. (ಏಜೆನ್ಸೀಸ್)
ನಕಲಿ ಆ್ಯಪ್ನಿಂದ ಪ್ರಯಾಣಿಕರಿಗೆ ಟೋಪಿ! ಪೊಲೀಸರ ಎಚ್ಚರಿಕೆ ಇಲ್ಲಿದೆ ನೋಡಿ…