ಸೊರಬ: ರೈತರಿಗೆ ಯೋಗ್ಯ ದರದಲ್ಲಿ ಕೃಷಿ ಉಪಕರಣಗಳು ದೊರೆಯುವಂತೆ ಶೀಘ್ರ ಮಾರಾಟ ಮಳಿಗೆ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಸುರಭಿ ತೋಟೋತ್ಪನ್ನ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಗೌಡ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುರಭಿ ತೋಟೋತ್ಪನ್ನ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಷೇರು ಹೊಂದಿರುತ್ತಾರೆ. ಸಂಘದ ಅಭಿವೃದ್ಧಿ ಜತೆಗೆ ರೈತರು ಆರ್ಥಿಕ ಮಟ್ಟ ಹೆಚ್ಚಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಲು ಪೂರಕ ಯೋಜನೆಗಳನ್ನು ರೂಪಿಸಿ ಸೌಲಭ್ಯ ನೀಡುವುದು ಸಂಘದ ಕರ್ತವ್ಯ ಎಂದು ತಿಳಿಸಿದರು.
ತಾಲೂಕಿನ ರೈತರಿಗೆ ತೋಟಗಾರಿಕಾ ಬೆಳೆಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಕಾರ್ಯಾಗಾರ ನಡೆಸುವ ಜತೆಗೆ ಕ್ರಿಮಿನಾಶಕ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗೆಳನ್ನು ತೆರೆಯಲು ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ಪೂರಕವಾದ ಹಲವು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಒ.ಬಿ.ರಾಜಶೇಖರ್ ಕೆರೆಕೊಪ್ಪ, ರಾಜೇಂದ್ರ ನಾಯಕ್, ಪ್ರೇಮಾ, ಬಸವೇಶ್ವರ, ಅಶೋಕ ಹೆಗಡೆ, ಉಮಾಪತಿ, ಶಿವಕುಮಾರ್, ಮಾಲತೇಶ್, ನಾಗರಾಜ್ ಇದ್ದರು.