ಚಿಕ್ಕಮಗಳೂರು: ಕಾಫಿ ನಾಡಿನ ಬಹುತೇಕ ಕಡೆ ಭಾನುವಾರ ದೀಪಾವಳಿ ಹಬ್ಬ ಆಚರಿಸಲಾಯಿತು. ಪಟಾಕಿ-ಸಿಡಿಮದ್ದುಗಳ ಅಬ್ಬರವಿಲ್ಲದೆ ಶನಿವಾರ ಧನಲಕ್ಷ್ಮೀ ಪೂಜೆ ಹಾಗೂ ಭಾನುವಾರ ಮಲೆನಾಡು ಭಾಗದಲ್ಲಿ ಗೋಪೂಜೆ ಸಂಭ್ರಮದಿಂದ ನಡೆಯಿತು.
ಮಲೆನಾಡು ಭಾಗದಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ ಪೂಜೆ ನೆರವೇರಿಸಿದರು. ಸಂಜೆ ತುಳಸಿ ಸುತ್ತ ಕೃಷಿ ಪರಿಕರಗಳನ್ನು ಇರಿಸಿ ಪೂಜೆ ನೆರವೇರಿಸಿದರು.
ಶನಿವಾರ ನರಕಚತುರ್ದಶಿ ಬಳಿಕ ಮಧ್ಯಾಹ್ನವೇ ಅಮಾವಾಸ್ಯೆಯೂ ಬಂದಿದ್ದರಿಂದ ನಗರದ ಜೈನ ಸಮುದಾಯದ ವರ್ತಕರು ರಾತ್ರಿ 7 ರಿಂದ 9 ಗಂಟೆಯವರೆಗೆ ತಮ್ಮ ಅಂಗಡಿ-ಮುಂಗಟ್ಟುಗಳಲ್ಲಿ ಧನಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಕುಟುಂಬದವರು, ಆಪ್ತೇಷ್ಟ ಬಂಧು ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೆಚ್ಚು ಆಡಂಬರವಿಲ್ಲದೆ ಸರಳತೆಗೆ ಹೆಚ್ಚು ಒತ್ತು ನೀಡಲಾಗಿತ್ತು. ನಗರದ 1800ಕ್ಕೂ ಹೆಚ್ಚು ಅಂಗಡಿಗಳಲ್ಲಿ ಧನಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಉಳಿದ ಸಮುದಾಯದ ವರ್ತಕರು ಭಾನುವಾರ ಬೆಳಗ್ಗೆ ಧನಲಕ್ಷ್ಮೀ ಪೂಜೆ ನೆರವೇರಿಸಿದರು. ನಗರದ ದೇವಾಲಯಗಳು ಸೇರಿದಂತೆ ಮನೆ ಮನೆಗಳಲ್ಲಿ ಸಹ ಮಹಾಲಕ್ಷ್ಮೀಯ ಪೂಜೆ ವಿಧ್ಯುಕ್ತವಾಗಿ ನಡೆಯಿತು.
ಗಮನ ಸೆಳೆದ ಕೆರ್ಕನ ಪೂಜೆ
ದೀಪಾವಳಿ ಹಬ್ಬದ ಪ್ರಯುಕ್ತ ಮಲೆನಾಡು ಭಾಗದಲ್ಲಿ ಅಂಟಿಕೆ-ಪಿಂಟಿಕೆ ಹೆಸರುವಾಸಿಯಾದರೆ, ಬಯಲು ಪ್ರದೇಶದಲ್ಲಿ ಕೆರ್ಕನ ಪೂಜೆ ವಿಶೇಷ. ಹಲವು ಕಡೆಗಳಲ್ಲಿ ಗೋವುಗಲ್ಲುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಿರೇಮಗಳೂರು, ದೊಡ್ಡ ಕುರುಬರಹಳ್ಳಿ, ಚಿಕ್ಕಕುರುಬರ ಹಳ್ಳಿ, ಕುರುವಂಗಿ, ಬಿಳೇಕಲ್ಲು. ಬೀಕನಹಳ್ಳಿ, ರ್ಕಪೇಟೆ, ಬಾಳೆಹಳ್ಳಿ, ಲಕ್ಯಾ, ಹಿರೇಗೌಜ, ಕಂಸಾಗರ, ಅರದವಳ್ಳಿ ಸೇರಿದಂತೆ ಬಯಲು ಭಾಗದಲ್ಲಿ ರೈತರು ಕೆರ್ಕನ ಪೂಜೆ ನೆರವೇರಿಸಿದರು.