ಕೊಪ್ಪಳ: ಮುಂಗಾರು ಆರಂಭವಾಗಿದ್ದು, ರೈತರಿಗೆ ಬೀಜೋಪಚಾರ, ಬಿತ್ತನೆಗೆ ಬೇಕಾದ ಸಿದ್ಧತೆ ಮಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಇದನ್ನೂ ಓದಿ: ಮುಂಗಾರು ಮಳೆ ತಡವಾಗಿ ಪ್ರವೇಶಿಸಲಿದೆ; ರೈತರಿಗೆ ಕೃಷಿ ಇಲಾಖೆ ಸಲಹೆ
ರೈತರು ಬಿತ್ತನೆಗೆ ಸಿದ್ಧತೆ ಕೈಗೊಂಡಿದ್ದಾರೆ. ಮಳೆ ಪ್ರಮಾಣ ಹಾಗೂ ವಾತಾವರಣಕ್ಕೆ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ಬಗ್ಗೆ ರೈತರಿಗೆ ಮಾಹಿತಿ ನೀಡಿ. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಕಚೇರಿ ಬಿಟ್ಟು ಜಮೀನುಗಳಿಗೆ ತೆರಳಿ, ಬಿತ್ತನೆಗೆ ಬೇಕಾದ ಸಿದ್ಧತೆ, ಬೀಜೋಪಚಾರ, ಬಳಕೆ ಮಾಡಬೇಕಾದ ಬೀಜ, ರಸಗೊಬ್ಬರ ಇನ್ನಿತರ ಅವಶ್ಯಕ ಮಾಹಿತಿ ನೀಡುವಂತೆ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 907.15 ಕ್ವಿಂಟಲ್ ಮೆಕ್ಕೆಜೋಳ, 236.56 ಕ್ವಿಂ. ಸಜ್ಜೆ, 7.36 ಕ್ವಿಂ. ನವೆಣೆ, 212.74 ಕ್ವಿಂ. ತೊಗರಿ, 64.48 ಕ್ವಿಂ. ಹೆಸರು, 59.57 ಕ್ವಿಂ. ಸೂರ್ಯಕಾಂತಿ ಸೇರಿ ಒಟ್ಟು 1487.86 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ.
ತಾಲೂಕುವಾರು ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ವಿವರ, ಮೇವಿನ ಲಭ್ಯತೆ, ತೋಟಗಾರಿಕೆ ಬೆಳೆಗಳ ಪರಿಸ್ಥಿತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಡಿಸಿ ಮಾಹಿತಿ ಪಡೆದರು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಪಾಲನಾ ಇಲಾಖೆ ಡಿಡಿ ಡಾ.ಎಚ್.ನಾಗರಾಜ ಇತರರಿದ್ದರು.
ತೋಟಗಾರಿಕೆ ಅಧಿಕಾರಿಗಳು ಗಾಳಿ, ಮಳೆಗೆ ಹಾನಿಯಾದ ಬೆಳೆಗಳ ಸಮೀಕ್ಷೆ ಕೈಗೊಂಡು ವರದಿ ನೀಡಿ. ಪಶು ಸಂಗೋಪನಾ ಅಧಿಕಾರಿಗಳು ಜಾನುವಾರು ಮೇವು, ನೀರಿನ ವರದಿ ಸಲ್ಲಿಸಿ. ಲಸಿಕಾಕರಣಕ್ಕೆ ಸಿದ್ಧತೆ ಮಾಡಿಕೊಳ್ಳಿ. ಈ ಬಗ್ಗೆ ಜಾನುವಾರು ಪಾಲಕರಿಗೆ ಅರಿವು ಮೂಡಿಸಿ.
| ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ
24,480 ಮೆಟ್ರಿಕ್ ಟನ್ ಯೂರಿಯಾ, 12,537 ಮೆ.ಟನ್ ಡಿಎಪಿ, 302 ಮೆ.ಟನ್ ಎಂಓಪಿ, 25,520 ಮೆ.ಟನ್ ಎನ್ಪಿಕೆಎಸ್, 433 ಮೆ.ಟನ್ ಎಸ್ಎಸ್ಪಿ ಸೇರಿ ಒಟ್ಟು 63,271 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿಕರಿಸಲಾಗಿದೆ. 20 ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ 7 ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ವಾಡಿಕೆ ಮಳೆಗಿಂತ ಶೇ.30 ಕಡಿಮೆ ಮಳೆಯಾಗಿದೆ.
| ಟಿ.ಎಸ್.ರುದ್ರೇಶಪ್ಪ, ಜಂಟಿ ಕೃಷಿ ನಿರ್ದೇಶಕ