ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ನಡುವೆಯೇ ಉರುಳಿಬಿದ್ದಿರುವ ಬಸ್ ಒಂದನ್ನು ಸುತ್ತುವರಿದಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ ದರ್ಭಂಗ್ ಜಿಲ್ಲೆಯ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ವೇಳೆ ಬಿಎಸ್ಎಫ್ ಯೋಧರಿಂದ ತುಂಬಿದ್ದ ಬಸ್ ಉರುಳಿಬಿದ್ದು 9 ಯೋಧರು ಮೃತಪಟ್ಟಿದ್ದಾರೆ ಎಂದು ಫೋಟೋಗೆ ಅಡಿಬರಹ ಬರೆದು ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಲ್ಲದೆ, ಜೈ ಹಿಂದ್, ಹುತಾತ್ಮ ಯೋಧರಿಗೆ ನನ್ನದೊಂದು ಸೆಲ್ಯೂಟ್ ಎಂದೂ ಬರೆಯಲಾಗಿದೆ.
ಆದರೆ, ಇದು ಸುಳ್ಳು ಸುದ್ದಿ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ. ಸೂಕ್ತ ಕೀ ವರ್ಡ್ ಸಹಾಯದಿಂದ ಹುಡುಕಾಡಿದಾಗ ಅಪಘಾತದಲ್ಲಿ 9 ಬಿಎಸ್ಎಫ್ ಯೋಧರು ಮೃತಪಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ವರದಿ ಪ್ರಕಟವಾಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆದರೆ, ವಾಸ್ತವ ಏನೆಂದರೆ ನ. 4ರಂದು ಬಿಹಾರದ ದರ್ಭಂಗ್-ಮುಜಾಫರ್ಪುರ್ ಗಡಿಯಲ್ಲಿ ಬಿಎಸ್ಎಫ್ ಯೋಧರಿದ್ದ ಬಸ್ ಉರುಳಿಬಿದ್ದಿದ್ದು ಸತ್ಯ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಮಸೀದಿಯಲ್ಲಿ ಹೋಮ ಮಾಡುತ್ತೇವೆ! ವಿವಾದಾತ್ಮಕ ಹೇಳಿಕೆ ಹಿಂಪಡೆದ ವಿಎಚ್ಪಿ ನಾಯಕಿ
ಈ ಸಂಬಂಧ ಹಿಂದೂಸ್ತಾನ್ ವೆಬ್ಸೈಟ್ನಲ್ಲಿ ಸುದ್ದಿ ಪ್ರಕಟವಾಗಿದ್ದು, ನ. 4ರಂದು ನಡೆದ ಅವಘಡದಲ್ಲಿ ಬಸ್ ಚಾಲಕ ಸೇರಿದಂತೆ 10 ಬಿಎಸ್ಎಫ್ ಯೋಧರು ಗಾಯಗೊಂಡಿರುವುದು ವರದಿಯಾಗಿದೆ. ರಸ್ತೆಯಲ್ಲಿದ್ದ ಸುಮಾರು 10 ಅಡಿ ಆಳದ ಗುಂಡಿಗೆ ಚಕ್ರಗಳು ಸಿಲುಕಿ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ ಉರುಳಿಬಿದ್ದಿತ್ತು. ಯೋಧರು ಚುನಾವಣಾ ಕರ್ತವ್ಯಕ್ಕೆಂದು ಸಿಂಘವಾಡಾಗೆ ತೆರಳಿದ್ದ ವೇಳೆ ಮುಜಾಫರ್ಪುರ್ ಜಿಲ್ಲೆಯ ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬುಧಕರ್ ಗ್ರಾಮದ ಬಳಿಯ ಸಿಂಘವಾಡಾ-ಬರ್ರಿ ಕೊಥಿ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು.
ಅನೇಕ ವೆಬ್ಸೈಟ್ಗಳು ಈ ಸಂಬಂಧ ಸುದ್ದಿ ಪ್ರಕಟಿಸಿವೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಆಜ್ ತಕ್ ಮಾಧ್ಯಮ ನ.5ರಂದು ಸುದ್ದಿ ಪ್ರಸಾರ ಮಾಡಿತು. ಸದ್ಯ ಯೋಧರು ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾವು ಸಂಭವಿಸಿಲ್ಲ ಎಂದು ಬಿಎಸ್ಎಫ್ ಮೂಲಗಳು ಸಹ ಮಾಹಿತಿ ಖಚಿತಪಡಿಸಿವೆ. ಹೀಗಾಗಿ ಸಾಮಾಜಿಕ ವೈರಲ್ ಆಗಿರುವ ಫೋಟೋ ಸತ್ಯವೇ ಆದರೆ, ಅದರ ಬಗ್ಗೆ ಹರಿಬಿಡಲಾಗಿರುವ ಸುದ್ದಿ ಸುಳ್ಳು ಎಂಬುದು ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ. (ಏಜೆನ್ಸೀಸ್)
ಇಷ್ಟರ ಮಟ್ಟಿಗೆ ಪೂರ್ಣಗೊಂಡಿತಾ ಅಯೋಧ್ಯೆ ರಾಮಮಂದಿರ ನಿರ್ಮಾಣ? ಯಾವುದು ಈ ದೇವಾಲಯ?