ನವದೆಹಲಿ: ದ್ವೇಷ ಭಾಷಣಕ್ಕೆ ಸಂಬಂಧಿಸಿದ ನಿಯಮಗಳನ್ನು ಕೆಲವು ವಿಭಾಗಗಳಿಗೆ ಫೇಸ್ಬುಕ್ ನವರು ಉದ್ದೇಶಪೂರ್ವಕವಾಗಿಯೇ ಅನ್ವಯಿಸುತ್ತಿಲ್ಲ ಎಂಬ ದೂರಿನ ಕುರಿತಂತೆ ದೆಹಲಿ ವಿಧಾನಸಭೆಯ ಸಮಿತಿ ಶನಿವಾರ ವಿಚಾರಣೆ ನಡೆಸಿತು. ಈ ಕುರಿತು ವಿವರಣೆ ನೀಡಲು ಸಮಿತಿಯ ಎದುರು ಸೆ.15ರಂದು ಹಾಜರಾಗಬೇಕೆಂದು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಜಿತ್ ಮೋಹನ್ರಿಗೆ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ನೇತೃತ್ವದ ಈ ಸಮಿತಿ ಸೂಚನೆ ನೀಡಿತು.
ದೆಹಲಿ ಗಲಭೆ ನಡೆಯುವಲ್ಲಿ ಹಾಗೂ ಅದು ಉಲ್ಬಣಗೊಳ್ಳುವಲ್ಲಿ ಫೇಸ್ಬುಕ್ ನ ಪಾತ್ರವೂ ಇದೆ ಎಂಬ ದೂರುಗಳ ಕುರಿತಂತೆ ತನಿಖೆ ನಡೆಸಲು ಈ ಸಮಿತಿಯನ್ನು ರಚಿಸಲಾಗಿದೆ. ಸಾಕ್ಷಿಗಳು ಸಲ್ಲಿಸಿದ ದೃಢವಾದ ಪುರಾವೆಗಳ ಆಧಾರದಲ್ಲಿ ಫೇಸ್ಬುಕ್ ಗೆ ಸಮನ್ಸ್ ನೀಡಲಾಗಿದೆ ಎಂದು ಸಮಿತಿ ತಿಳಿಸಿದೆ. ಪತ್ರಕರ್ತರಾದ ಪರಂಜಯ್ ಠಾಕುರ್ತಾ ಮತ್ತು ಕುನಾಲ್ ಪುರೋಹಿತ್ ಸಹಿತ ಹಲವರು ಸಮಿತಿ ಮುಂದೆ ಸಾಕ್ಷಿ ಹೇಳಿದ್ದಾರೆ. ಅದನ್ನು ಸಮಿತಿ ಈಗಾಗಲೇ ಪರಿಶೀಲಿಸಿದೆ.
ಇದನ್ನೂ ಓದಿ: 1 ರೂಪಾಯಿ ಮತ್ತು ಪ್ರಶಾಂತ್ ಭೂಷಣ್ ಅವರ ಮೊದಲ ಪ್ರತಿಕ್ರಿಯೆ!
ಬಿಜೆಪಿ ಮತ್ತು ಬಲಪಂಥೀಯ ವಿಚಾರಧಾರೆಗಳ ವ್ಯಕ್ತಿಗಳು ಮಾಡಿದ ದ್ವೇಷ ಭಾಷಣಗಳಿಗೆ ಸಂಬಂಧಿಸಿ ಫೇಸ್ಬುಕ್ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಮೆರಿಕದ ಪತ್ರಿಕೆಯೊಂದು ಮಾಡಿದ ವರದಿಯ ಆಧಾರದಲ್ಲಿ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯೊಂದು ಈಗಾಗಲೇ ಫೇಸ್ಬುಕ್ ಸಂಸ್ಥೆ ಅಧಿಕಾರಿಗಳ ವಿಚಾರಣೆ ನಡೆಸಿದೆ. (ಏಜೆನ್ಸೀಸ್)
ಟ್ವಿಟರ್ನಲ್ಲಿ ಅವಹೇಳನ ಮಾಡಿದ ಮಹಿಳೆಗೆ ಬಂಧನ ಭೀತಿ: ಹೈಕೋರ್ಟ್ ಹೇಳಿದ್ದೇನು?