ಮಂಡ್ಯ: ನೇತ್ರದಾನ ಮಾಡುವುದು ಉತ್ತಮ ಸಾಮಾಜಿಕ ಸೇವೆ ಎಂದು ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ತಾಲೂಕಿನ ಕೆರಗೋಡು ಗ್ರಾಮದ ಗಣಪತಿ ಮಂಟಪದಲ್ಲಿ 25ನೇ ಗಣೇಶೋತ್ಸವದ ಅಂಗವಾಗಿ ಬೆನಕ ಬಳಗ, ಗೌರಿಶಂಕರ ಸೇವಾ ಟ್ರಸ್ಟ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್), ಮಂಡ್ಯ ಅಂಧತ್ವ ನಿವಾರಣಾ ಕೇಂದ್ರ, ಕೆರಗೋಡು ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಗವಾಗಿ ಗುರುವಾರ ಆಯೋಜಿಸಿದ್ದ ಅಂಗಾಂಗ ದಾನ, ನೇತ್ರದಾನ ಹಾಗೂ ನೋಂದಣಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನೇತ್ರದಾನ ಮಾಡುವುದರಿಂದ ಇಬ್ಬರ ಅಂಧರ ಬಾಳಿಗೆ ಬೆಳಕಾಗಬಹುದು. ಜತೆಗೆ ಅಂಗಾಂಗ ದಾನದಿಂದಲೂ ಮತ್ತೊಬ್ಬರಿಗೆ ಉಪಯೋಗವಾಗಲಿದೆ. ಇದೊಂದು ಉತ್ತಮ ಸೇವೆ. ಅಂತೆಯೇ ಗಣೇಶೋತ್ಸವದ ಅಂಗವಾಗಿ ಇಂತಹ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಸಂಘ ಸಂಸ್ಥೆಗಳು ಹೆಚ್ಚೆಚ್ಚು ಸಾಮಾಜಿಕ ಸೇವೆ ಮಾಡುವಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಅಂಗಾಂಗ ಹಾಗೂ ನೇತ್ರದಾನದ ಬಗ್ಗೆ ಅಂಧತ್ವ ನಿವಾರಣಾ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷವರ್ಧನ್ ಉಪನ್ಯಾಸ ನೀಡಿದರು. ಮನ್ಮುಲ್ ಉಪಾಧ್ಯಕ್ಷ ರಘುನಂದನ್, ನಿರ್ದೇಶಕ ನೆಲ್ಲಿಗೆರೆ ಬಾಲು, ಮಾರಗೌಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಸಂತರಾಜ್, ಮಹೇಶ್, ಎಂ.ಡಿ.ರಂಗಸ್ವಾಮಿ, ಗಂಗಾಧರ, ವೆಂಕಟೇಶ್, ರೇಣು, ಸೋಮ ಇತರರಿದ್ದರು.