ಪಿರಿಯಾಪಟ್ಟಣ: ಮುಂಬೈನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ದಾಳಿ ನಡೆಸಿರುವ ದೇಶದ್ರೊಹಿಗಳ ಪೌರತ್ವ ರದ್ದುಗೊಳಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಎಸ್. ರಾಮು ಒತ್ತಾಯಿಸಿದರು.
ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ತಾಲೂಕು ಅಂಬೇಡ್ಕರ್ ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಜಮಾಯಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿರುವ ಮನವಿ ಪತ್ರವನ್ನು ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಅವರಿಗೆ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿರುವ ಮ್ಯೂಜಿಯಂನಲ್ಲಿ ಬಾಬಾ ಸಾಹೇಬರ ಪುಸ್ತಕ, ಅಪರೂಪದ ಚಿತ್ರಗಳು ಸೇರಿದಂತೆ ಹಲವು ಕಲಾಕೃತಿಗಳನ್ನು ಸಂಗ್ರಹಿಸಲಾಗಿದೆ. ಇಂತಹ ಪ್ರದೇಶದ ಮೇಲಿನ ದಾಳಿ ಹೇಯ ಕೃತ್ಯವಾಗಿದ್ದು, ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ಆದಿಜಾಂಬವ ಸಂಘದ ಜಿಲ್ಲಾ ಉಪಾಧ್ಯಕ್ಷ ಸೀಗೂರು ವಿಜಯಕುಮಾರ್, ಬಹುಜನ ಸಮಾಜ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸಿ.ಎಸ್.ಜಗದೀಶ್, ಪ್ರಧಾನ ಕಾರ್ಯದರ್ಶಿ ರಾಜಣ್ಣ, ತಾಲೂಕು ಅಂಬೇಡ್ಕರ್ ಸೇನೆ ಅಧ್ಯಕ್ಷ ಸಿ.ಕೆ. ರಾಜಣ್ಣ, ಕಾರ್ಯಾಧ್ಯಕ್ಷ ಬಿ.ಸಿ. ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಉಪಾಧ್ಯಕ್ಷ ಶಾಂತಕುಮಾರ್, ಸಂಘದ ಪದಾಧಿಕಾರಿಗಳು ಇದ್ದರು.