ಶೃಂಗೇರಿ: ಕೆರೆ, ಧರೇಕೊಪ್ಪ, ಅಡ್ಡಗದ್ದೆ ಗ್ರಾಪಂಗಳಲ್ಲಿ ಗುರುವಾರ ಹಾಗೂ ಮೆಣಸೆ, ನೆಮ್ಮಾರ್, ಬೇಗಾರು ಮುಂತಾದ ಕಡೆ ಶುಕ್ರವಾರ ಸ್ವೀಪ್ ಸಮಿತಿಯಿಂದ ಮತದಾನದ ಜಾಗೃತಿ ಅಭಿಯಾನ ನಡೆಸಲಾಯಿತು.
ಗ್ರಾಪಂಗಳಲ್ಲಿ ಸ್ವೀಪ್ ಸಮಿತಿ ಹಾಗೂ ಸಂಜೀವಿನಿ ಗ್ರಾಪಂ ಒಕ್ಕೂಟದ ಸಹಭಾಗಿತ್ವದಲ್ಲಿ ಜಾಗೃತಿ ಜಾಥಾ, ಮ್ಯೂಸಿಕಲ್ ಚೇರ್,ಪಾಸಿಂಗ್ ದಿ ಬಾಲ್, ಸಹಿ ಸಂಗ್ರಹ ಅಭಿಯಾನದ ಮೂಲಕ ಮತದಾನದ ಅರಿವು ಮೂಡಿಸಲಾಯಿತು. ಧರೇಕೊಪ್ಪ ಪಿಡಿಒ ಶಕುಂತಲಾ ಮಾತನಾಡಿ, ಸಂವಿಧಾನ ಮತದಾನದ ಹಕ್ಕು ನೀಡಿದೆ. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. 85 ವರ್ಷ ಮೇಲ್ಪಟ್ಟ ವೃದ್ಧರು ಮನೆಯಲ್ಲಿ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಸಂವಿಧಾನದತ್ತ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಬೇಕು ಎಂದರು. ಗ್ರಾಪಂ ವ್ಯಾಪ್ತಿಯಲ್ಲಿ ಜಾಥಾ ನಡೆಸಿ ಕರಪತ್ರ ವಿತರಿಸಲಾಯಿತು. ತಾಲೂಕಿನ ಅಧಿಕಾರಿಗಳಾದ ರವಿ, ಆದರ್ಶ್, ಸಿಬ್ಬಂದಿ ಚೈತ್ರಾ, ಪವಿತ್ರಾ, ಸುಪ್ರೀತಾ ಇತರರಿದ್ದರು.