ಗುರುಪುರ: ಶ್ರೀ ಕೋರ್ದಬ್ಬು ದೈವ ನೀಡಿದ ನುಡಿಯಂತೆ ಮಾಣಿಬೆಟ್ಟುವಿನ ಕೋರ್ದಬ್ಬು ಪರಿವಾರ ದೈವಸ್ಥಾನದ ಪಕ್ಕದ ಜಾಗದಲ್ಲಿ ಸೋಮವಾರ ಮತ್ತೊಮ್ಮೆ ಉತ್ಖನನ ಮಾಡಿದ್ದು, ಹಲವು ದೈವದ ಪರಿಕರಗಳು ಪತ್ತೆಯಾಗಿವೆ.
ತಾಂಬೂಲ ಪ್ರಶ್ನೆಯ ವೇಳೆ ಶಶಿಕುಮಾರ್ ಪಂಡಿತ್ ನೀಡಿರುವ ಸೂಚನೆಯಂತೆ ಜೂನ್ 16ರಂದು ಮೂಲ ಸಾನ್ನಿಧ್ಯದಲ್ಲಿ ಮೊದಲ ಸಲ ಉತ್ಖನನ ಮಾಡಿದ್ದಾಗ ಘಂಟೆಮಣಿ, ತಂದೇಲ್, ಗೋಣ(ಕೋಣ), ಜುಮಾದಿ(ಧೂಮಾವತಿ) ದೈವದ ಮೂರ್ತಿ, ಕಡ್ಸಲೆ, ಮೊಲ, ಮಣ್ಣಿನ ದೀಪ ಮತ್ತಿತರರ ಕೆಲವು ಸೊತ್ತುಗಳು ಪತ್ತೆಯಾಗಿತ್ತು.
ಮೂಲ ಸಾನ್ನಿಧ್ಯದಲ್ಲಿ ಇನ್ನೂ ಕೆಲವು ಸೊತ್ತುಗಳಿರುವ ಬಗ್ಗೆ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ದೈವಸ್ಥಾನದಲ್ಲಿ ಜೂನ್ 18ರಂದು ಕೋರ್ದಬ್ಬು ಮತ್ತು ಪಂಜುರ್ಲಿ ದೈವದ ದರ್ಶನ ನಡೆಸಿದಾಗ ಮೂರು ದಿನಗಳ ಬಳಿಕ ಮತ್ತೊಂದು ಬಾರಿ ಉತ್ಖನನ ನಡೆಸುವಂತೆ ದೈವಗಳ ನುಡಿಯಾಯಿತು. ಅದರಂತೆ ಸೋಮವಾರ ಉತ್ಖನನದ ವೇಳೆ ದೈವಕ್ಕೆ ಸಂಬಂಧಿಸಿದ 2 ಘಂಟಾಮಣಿ, ಮಣ್ಣಿನ ಕುಂಭ, ಚೌಕಾಕಾರದ ಎರಡು ಕಲ್ಲು, ಗಂಧ ತೇಯುವ ದುಂಡಗಿನ ಕಪ್ಪು ಕಲ್ಲು ಪತ್ತೆಯಾಗಿದೆ.
ಉತ್ಖನನದ ವೇಳೆ ಮಾಣಿಬೆಟ್ಟುಗುತ್ತು ವಿನಯಕುಮಾರ್ ಶೆಟ್ಟಿ, ಜಗದೀಶ ಶೆಟ್ಟಿ, ಗಂಗಾಧರ ಸಪಲಿಗ ಬರ್ಕೆ, ನಳಿನಿ ಶೆಟ್ಟಿ, ಶ್ರೀನಿವಾಸ ಸಾಲ್ಯಾನ್, ಸುಶೀಲ್ ಬರ್ಕೆ, ನಿತೇಶ್, ಪ್ರಕಾಶ್ ಪೂಜಾರಿ ಮಾಣಿಬೆಟ್ಟು ಹಾಗೂ ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.