More

    ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯ ಬಳಕೆ; ಇದು ಲಜ್ಜೆಗೇಡಿತನದ ಪರಮಾವಧಿ ಎಂದ ಮಾಜಿ ಸಿಎಂ ಎಚ್​ಡಿಕೆ

    ಬೆಂಗಳೂರು: ಆಶಾ ಕಾರ್ಯಕರ್ತೆಯರಿಂದ ರಾಜ್ಯ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಗಳ ಕುರಿತು ಸಮೀಕ್ಷೆ ಮಾಡಿಸುತ್ತಿರುವ ಕುರಿತು ಕಿಡಿಕಾರಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದು ಲಜ್ಜೆಗೇಡಿತನದ ಪರಮಾವಧಿ ಎಂದು ಹರಿಹಾಯ್ದಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಸಿದ್ದರಾಮಯ್ಯ ಅವರ ಸರಕಾರ ಮಾಡಿಕೊಂಡಿರುವ ಇಡೀ ಗ್ಯಾರಂಟಿ ಸೆಟಪ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

    ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ನಿಯೋಜಿತವಾಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಕಾಂಗ್ರೆಸ್ ಸರಕಾರ ಮಾಡಿಸುತ್ತಿರುವ ಗ್ಯಾರಂಟಿ ಸಮೀಕ್ಷೆ ಲಜ್ಜೆಗೇಡಿತನದ ಪರಮಾವಧಿ. ಈ ಮಹಿಳೆಯರಿಗೆ ‘ಗ್ಯಾರಂಟಿ ಸ್ವಯಂ ಸೇವಕರು’ ಅಂತ ಹೆಸರು. ಹಾಗಾದರೆ, ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿ ತಮಗೆ ಬೇಕುಬೇಕಾದ ಸಂಸ್ಥೆಗಳಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಸುರಿದ ಜನರ ತೆರಿಗೆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.

    ಹೆಚ್.ಎಂ.ರೇವಣ್ಣ ಅವರಿಗೆ ಸಂಪುಟದರ್ಜೆ ಕೊಟ್ಟು ರಚಿಸಲಾಗಿರುವ ‘ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ ಏನು ಕಿಸಿಯುತ್ತಿದೆ? ಜಿಲ್ಲೆ, ತಾಲೂಕು, ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಸಮೀಕ್ಷೆ ಮಾಡುತ್ತಿಲ್ಲವೇ. ಗ್ಯಾರಂಟಿ ಅನುಷ್ಠಾನ ನಿರ್ವಹಣೆಗೆ ವಾರ್ಷಿಕ ₹16 ಕೋಟಿ ವೆಚ್ಚಿಸುತ್ತೇವೆ ಎಂದಿದ್ದಾರೆ ಸಿಎಂ. ಹಾಗಾದರೆ, ಇದಕ್ಕೆ ಹೋಗುತ್ತಿರುವ ವೇತನ, ಭತ್ಯೆಗಳೆಲ್ಲ ವ್ಯರ್ಥವೇ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪೋಲಿಯೋ ಲಸಿಕೆ ಹಾಕುವುದರ ಜತೆಗೆ ಈ ಸುಡುಬಿಸಿಲಿನಲ್ಲಿ ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಅದೂ ಒತ್ತಾಯಪೂರ್ವಕವಾಗಿ… ಹಾಗಾದರೆ, ಅವರೂ ಈ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಾರೆಯೆ.

    ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಸ್ಫೋಟಕ ಬ್ಯಾಟಿಂಗ್; ಸತತ ಎರಡನೇ ಜಯ ದಾಖಲಿಸಿದ ಕರ್ನಾಟಕ ಬುಲ್ಡೋಜರ್ಸ್​​

    ಒಬ್ಬ ಕಾರ್ಯಕರ್ತೆಗೆ 120ರಿಂದ 150 ಮನೆ ಹಂಚಿಕೆ ಮಾಡಿದ್ದು, 10–15 ದಿನದಲ್ಲಿ ಸಮೀಕ್ಷೆ ಮುಗಿಸಬೇಕಿದೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೂ ಉರಿಬಿಸಿಲಿನಲ್ಲಿ ಮಾಡುವ ಈ ಕೆಲಸಕ್ಕೆ ಅವರಿಗೆ ಸಿಗುವ ಗೌರವಧನ ಕೇವಲ ₹1,000! ಅದೇ ‘ಎಸಿ ರೂಂ ಸಮೀಕ್ಷೆ ಗಿರಾಕಿಗಳಿಗೆ ಕೋಟಿ ಕೋಟಿ ಹಣ. ಜನರ ತೆರಿಗೆ ಹಣದಿಂದಲೇ ಗ್ಯಾರಂಟಿ ಸಮಾವೇಶಗಳನ್ನು (ಇವು ಚುನಾವಣಾ ಪ್ರಚಾರ ಸಭೆಗಳು) ಸಾಲು ಸಾಲಾಗಿ ನಡೆಸುತ್ತಿರುವ ಸರಕಾರಕ್ಕೆ ಸಮೀಕ್ಷೆಗಳ ಮೂಲಕವೂ ದುಡ್ಡು ಹೊಡೆಯುವ ಹಪಾಹಪಿ ‘ಪಟ್ಟು-ಮಟ್ಟು-ಒಳಗುಟ್ಟು’ ಕಂಪನಿ ಸೇರಿ ಅಂತಹ ಹಲವಾರು ನಿಗೂಢ ಕಂಪನಿಗಳಿಗೆ ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿಯೇ ಕೋಟಿ ಕೋಟಿಯಷ್ಟು ಜನರ ತೆರಿಗೆ ಹಣ ಸುರಿಯುತ್ತಿದೆ ಸರಕಾರ ಎಂದು ಆರೋಪಿಸಿದ್ದಾರೆ.

    ಗ್ಯಾರಂಟಿ ಸಮಾವೇಶಗಳಿಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರೇ ಬರಬೇಕು, ಪಲ್ಸ್ ಪೋಲಿಯೋ ಲಸಿಕೆಯನ್ನೂ ಇವರೇ ಹಾಕಬೇಕು, ಗ್ಯಾರಂಟಿ ಸಮೀಕ್ಷೆಯನ್ನೂ ನಡೆಸಬೇಕು ಹಾಗೂ ತಮ್ಮ ನಿತ್ಯದ ನಿಗದಿತ ಕರ್ತವ್ಯವನ್ನೂ ನಿಭಾಯಿಸಬೇಕು. ಹಾಗಾದರೆ, ಸರಕಾರ ತೆರಿಗೆ ಹಣ ಸುರಿದು ಮಾಡಿಸುತ್ತಿರುವ ‘ಎಸಿ ರೂಂ ಸಮೀಕ್ಷೆ’ಗಳ ಕಥೆ ಏನು? ಸಮೀಕ್ಷೆ ಕಷ್ಟ ಈ ಹೆಣ್ಣುಮಕ್ಕಳದು, ಜನರ ತೆರಿಗೆ ಹಣ ‘ಎಸಿ ರೂಂ ಗಿರಾಕಿ’ಗಳದು! ಬವಣೆ ಒಬ್ಬರದು, ಭರ್ಜರಿ ಲಾಭ ಇನ್ನೊಬ್ಬರದ್ದು ಎಂದು ಹರಿಹಾಯ್ದಿದ್ದಾರೆ.

    ಅಂಗನವಾಡಿಗೆ ಬರುವ ಮಕ್ಕಳ ಲಾಲನೆ–ಪಾಲನೆ, ಗರ್ಭಿಣಿಯರು- ಬಾಣಂತಿಯರಿಗೆ ಊಟ, ಪ್ರತಿ ತಿಂಗಳ ಮೊದಲ & 3ನೇ ಶುಕ್ರವಾರ ಪೋಷಣ್‌ ಅಭಿಯಾನ, 3ನೇ ಶನಿವಾರ ಬಾಲವಿಕಾಸ ಸಮಿತಿ ಸಭೆಗೆ ಹಾಜರಿ ಜತೆಗೆ ಇಲಾಖೆ ನಿಯೋಜಿಸುವ ಕೆಲಸಗಳನ್ನೂ ನಿರ್ವಹಿಸಬೇಕು. ಮಾರ್ಚ್ 3ರಿಂದ ಗ್ಯಾರಂಟಿ ಸಮೀಕ್ಷೆ ಬೇರೆ. ಹಾಗಾದರೆ, ಸಿದ್ದರಾಮಯ್ಯ ಅವರ ಸರಕಾರ ಮಾಡಿಕೊಂಡಿರುವ ಇಡೀ ಗ್ಯಾರಂಟಿ ಸೆಟಪ್ ಏನು ಮಾಡುತ್ತಿದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಣ್ಣಬಣ್ಣದ ಜಾಹೀರಾತು ನೀಡುವುದಕ್ಕೆ ಮಾತ್ರ ಸೀಮಿತವಾಗಿದೆಯೇ ಜನರ ತೆರಿಗೆ ದುಡ್ಡು, ಯಲ್ಲಮನ ಜಾತ್ರೆ ಎನ್ನುವಂತಾಗಿದೆ. ಬರ, ಕುಡಿಯುವ ನೀರಿನ ಹಾಹಾಕಾರದ ನಡುವೆಯೂ ಇವರ ಗ್ಯಾರಂಟಿ ರಾಜಕೀಯಕ್ಕೆ ಬರವಿಲ್ಲ, ಪ್ರಚಾರಕ್ಕೂ ಬರವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts