ವಿಶಾಖಪಟ್ಟಣಂ: ಸುಮಾರು ಐದು ಗಂಟೆಗಳ ಕಾಲ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ನಡೆದ ಭಾರೀ ಹೈಡ್ರಾಮಾ ಬಳಿಕ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡುರನ್ನು ಗುರುವಾರ ಸಂಜೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು.
ಎರಡು ದಿನಗಳ ಪ್ರಜಾ ಚೈತನ್ಯ ಯಾತ್ರೆ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂನ ಪೆಂಡುರ್ತಿ ಏರಿಯಾಗೆ ತೆರಳಲು ಇಂದು ಬೆಳಗ್ಗೆ 11:45ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ನಾಯ್ಡು ಆಗಮಿಸಿದರು. ಪೆಂಡುರ್ತಿಯಲ್ಲಿ ದಲಿತರ ಭೂಮಿಯನ್ನು ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಅಕ್ರಮವಾಗಿ ಒತ್ತುವರಿ ಮಾಡಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಜನರೊಂದಿಗೆ ಮಾತನಾಡಲು ನಾಯ್ಡು ಆಗಮಿಸಿದ್ದರು. ಆದರೆ, ವಿಮಾನ ನಿಲ್ದಾಣ ಬಳಿಯೇ ಅವರ ಬೆಂಗಾವಲು ವಾಹನವನ್ನು ತಡೆದ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು, ನಾಯ್ಡು ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು.
ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣ ರಾಜಕೀಯ ರಣರಂಗವಾಯಿತು. ಟಿಡಿಪಿ ಕಾರ್ಯಕರ್ತರು ನಾಯ್ಡು ಪರ ಘೋಷಣೆ ಕೂಗಿ, ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಹೊತ್ತಿಕೊಂಡಿತು.
ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿ ಆಗುವುದನ್ನು ವಿರೋಧಿಸಿದ ಮಾಜಿ ಸಿಎಂ ನಾಯ್ಡು ಅವರಿಗೆ ಇಲ್ಲಿಗೆ ಬರಲು ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ವೈಎಸ್ಆರ್ಸಿ ಕಾರ್ಯಕರ್ತರು ಮೊಟ್ಟೆ, ಟೊಮ್ಯಾಟೋ ಮತ್ತು ಚಪ್ಪಲಿಗಳನ್ನು ನಾಯ್ಡು ಬೆಂಗಾವಲು ವಾಹನದತ್ತ ಎಸೆದರು. ಅಲ್ಲದೆ, ವಿಶಾಖಪಟ್ಟಣಂದಿಂದ ಹಾದು ಹೋಗುವ ಕೋಲ್ಕತ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ನಾಯ್ಡು ಅವರು ಮುಂದಕ್ಕೆ ಹೋಗಲು ಬಿಡದೆ ಘೋಷಣೆ ಕೂಗಿದರು.
ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯಿದ್ದರೂ ಎರಡು ಪಕ್ಷದವರು ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಕಷ್ಟು ಹರಸಾಹಸ ಪಡಬೇಕಾಯಿತು.
ಇದೇ ವೇಳೆ ಪೊಲೀಸರ ವಿರುದ್ಧ ಕಿಡಿಕಾರಿದ ಚಂದ್ರಬಾಬು ನಾಯ್ಡು, ಸಾವಿರಾರು ವೈಎಸ್ಆರ್ಸಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ಬಂದು ವಾತಾವರಣ ಹದಗೆಡಿಸಲು ಹೇಗೆ ಅನುಮತಿ ನೀಡಿದಿರಿ? ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜಗನ್ ರೆಡ್ಡಿ ಮಾಡಿದ ಪಾದಯಾತ್ರೆಗೆ ನಮ್ಮ ಕಾರ್ಯಕರ್ತರೇನಾದರೂ ತಡೆವೊಡ್ಡಿದರೇ? ಈ ಜನರು ವೈಜಾಗ್ನ ಶಾಂತಿಯುತ ವಾತಾವರಣವನ್ನು ಹಾಳುಗೆಡುವುತ್ತಿದ್ದಾರೆ. ಅವರು ನಮ್ಮ ಮೇಲೆ ಫೈರಿಂಗ್ ಆದ್ರೂ ಮಾಡಬಹುದು ಅಥವಾ ಸಾಯಿಸಲೂ ಬಹುದು ಅದಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ ಎಂದು ಗುಡುಗಿದರು.
ಈ ರಾಜಕೀಯ ಹೈಡ್ರಾಮ ಸಂಜೆ 5 ಗಂಟೆಯವರೆಗೂ ಜರುಗಿತು. ಕೊನೆಗೆ ಪೊಲೀಸರು ಅಪರಾಧ ಪ್ರಕ್ರಿಯೆ ಸಂಹಿತೆಯ 151 ಸೆಕ್ಷನ್ ಅಡಿಯಲ್ಲಿ ರಕ್ಷಣೆಯ ದೃಷ್ಟಿಯಿಂದ ನಾಯ್ಡುಗೆ ಬಂಧನದ ನೋಟಿಸ್ ನೀಡಿದರು. ಬಳಿಕ ಅವರನ್ನು ವಿಮಾನ ನಿಲ್ದಾಣದಿಂದ ವಿಶೇಷ ಕೋಣೆಗೆ ಕರೆದೊಯ್ದು ಕೂಡಿ ಹಾಕಿದರು.
ಬಳಿಕ ಮಾತನಾಡಿದ ನಾಯ್ಡು ಅವರು ಪರಿಸ್ಥಿತಿ ತಹಬದಿಗೆ ಬರೋವರೆಗೂ ಹೊರಬರಲು ನನಗೆ ಅವಕಾಶವನ್ನು ನೀಡಲಿಲ್ಲ. ಅಲ್ಲದೆ, ವಿಜಯವಾಡದಿಂದ ನನ್ನನ್ನು ವಾಪಸ್ ಕಳುಹಿಸಿದರು ಎಂದು ಆರೋಪಿಸಿದರು.
ಸಿಎಂ ಜಗನ್ ರೆಡ್ಡಿ ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳ ಯೋಜನೆಗೆ ನಿರ್ಧರಿಸಿದ್ದಾರೆ. ಅದರಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಆಧಾರದ ಮೇಲೆ ರಾಜಧಾನಿಯನ್ನು ವಿಂಗಡಿಸಿದ್ದು, ಈ ಹಿಂದೆ ಇದ್ದ ಕಾರ್ಯಾಂಗ ರಾಜಧಾನಿಯನ್ನು ಅಮರಾವತಿಯಿಂದ ವಿಶಾಖಪಟ್ಟಣಂಗೆ ರೆಡ್ಡಿ ಸ್ಥಳಾಂತರಿಸಿದ್ದು, ಇದಕ್ಕೆ ನಾಯ್ಡು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಶಾಖಪಟ್ಟಣಂಗೆ ಭೇಟಿ ನೀಡಿದಾಗ ವೈಎಸ್ಆರ್ಸಿ ಕಾರ್ಯಕರ್ತರು ನಾಯ್ಡು ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)