ಅಮರಾವತಿ: ಲೋಕಸಭಾ ಚುನಾವಣೆ ಕಣ ರಂಗೇರುತ್ತಿರುವ ಬೆನ್ನಲ್ಲೇ ಅಭ್ಯರ್ಥಿಗಳು ಮತ್ತು ಪಕ್ಷಗಳು ತಮ್ಮ ವಿರೋಧಿಗಳನ್ನು ಮಣಿಸಲು ನಾನಾ ಕಸರತ್ತು ಮತ್ತು ತಂತ್ರಗಳಿಗೆ ಮೊರೆಹೋಗುತ್ತಿದ್ದಾರೆ. ಅದೇ ರೀತಿ ಆಂಧ್ರದಲ್ಲಿ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್(ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ) ಅವರ ಫೋನ್ ಟ್ಯಾಪ್ ಮಾಡಿ ಹ್ಯಾಕ್ ಮಾಡುವ ಯತ್ನ ನಡೆಯುತ್ತಿದೆ. ಇದನ್ನು ಸ್ವತಃ ಆ್ಯಪಲ್ ಕಂಪನಿ ನಾರಾ ಲೋಕೇಶ್ ಅವರಿಗೆ ತಿಳಿಸಿದೆ.
ಇದನ್ನೂ ಓದಿ: ಪೋಲಿ ಹುಡುಗರ ಬೈಕ್ ಸವಾರಿ..ಪಾಲಕರಿಗೆ ನೆಟ್ಟಿಗರ ತರಾಟೆ!
ಫೋನ್ ಟ್ಯಾಪ್ ಮಾಡುವ ಸಂಗತಿ ತಿಳಿಯುತ್ತಿದ್ದಂತೆ ಆ್ಯಪಲ್ ಕಂಪನಿ ನಾರಾ ಲೋಕೇಶ್ ಫೋನ್ ಗೆ ಸೆಕ್ಯುರಿಟಿ ಅಲರ್ಟ್ ಕಳುಹಿಸಿದೆ. ನಾರಾ ಲೋಕೇಶ್ ಅವರ ಫೋನ್ಗೆ ಟ್ಯಾಪಿಂಗ್ ಮತ್ತು ಹ್ಯಾಕಿಂಗ್ ಎಚ್ಚರಿಕೆ ಸೂಚನೆಯನ್ನು ನೀಡಿದೆ.
ನಿಮ್ಮ ಫೋನ್ ಅನ್ನು ಅಪರಿಚಿತ ಸಾಫ್ಟ್ವೇರ್ ಮೂಲಕ ಹ್ಯಾಕ್ ಮಾಡಿ ಟ್ಯಾಪ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಎಚ್ಚರಿಸಿದೆ. ಫೋನ್ ಟ್ಯಾಪಿಂಗ್ ಮತ್ತು ಹ್ಯಾಕ್ ಆಗದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ನಾರಾ ಲೋಕೇಶ್ ಅವರ ಫೋನ್ ಕದ್ದಾಲಿಕೆ ಮತ್ತು ಹ್ಯಾಕಿಂಗ್ನಲ್ಲಿ ವೈಸಿಪಿ ಸರ್ಕಾರವೇ ಭಾಗಿಯಾಗಿದೆ ಎಂದು ಟಿಡಿಪಿ ನಾಯಕರು ಕಿಡಿಕಾರಿದ್ದಾರೆ. ಫೋನ್ ಟ್ಯಾಪಿಂಗ್ ಘಟನೆ ಮತ್ತು ಆಪಲ್ ಎಚ್ಚರಿಕೆಯ ಅಧಿಸೂಚನೆಯ ಹಿನ್ನೆಲೆಯಲ್ಲಿ ಟಿಡಿಪಿ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಿದೆ.
ಜಗನ್ ಸರ್ಕಾರ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಟಿಡಿಪಿ ನಾಯಕರು ಆರೋಪಿಸುತ್ತಿದ್ದಾರೆ. ಫೋನ್ ಕದ್ದಾಲಿಕೆ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಟಿಡಿಪಿ ಮುಖಂಡರು ಹೇಳಿದ್ದಾರೆ. ಜನರ ನಂಬಿಕೆ ಕಳೆದುಕೊಂಡಿರುವ ಟಿಡಿಪಿ ನಾಯಕರು ಎಪಿ ಸಿಎಂ ಜಗನ್ ಫೋನ್ ಕದ್ದಾಲಿಕೆ ಮಾಡಿದ್ದಾರೆಂದು ಬೊಬ್ಬೆ ಹಾಕುತ್ತಿದ್ದಾರೆಂದು ಟೀಕಿಸುತ್ತಿದ್ದಾರೆ.