ನವದೆಹಲಿ: 1995ರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ(RJD) ಪಕ್ಷದ ಮಾಜಿ ಲೋಕಸಭೆ ಸದಸ್ಯ ಪ್ರಭುನಾಥ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
1995ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಮತ ಚಲಾಯಿಸದರೆಂಬ ಕಾರಣಕ್ಕೆ ಪ್ರಭುನಾಥ್ ಸಿಂಗ್ ಇಬ್ಬರು ವ್ಯಕ್ತಿಗಳನ್ನು ಅಮಾನುಷವಾಗಿ ಹೊಡೆದು ಕೊಲೆ ಮಾಡಿದ್ದರು. ಪ್ರಭುನಾಥ್ ಸಿಂಗ್ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹಾಗೂ ಪಟ್ನಾ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಆಗಸ್ಟ್ 18ರಂದು ತಡೆ ನೀಡಿತ್ತು.
ಪ್ರಕಣರದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್, ಅಭಯ್.ಎಸ್. ಓಕಾ, ವಿಕ್ರಮ್ನಾಥ್ ಅವರಿದ್ದ ತ್ರಿಸದಸ್ಯ ಪೀಠವು ಭಾರತೀಯ ದಂಡ ಸಂಹಿತೆ(IPC Section) 302, 307ರ ಅಡಿಯಲ್ಲಿ ಪ್ರಭುನಾಥ್ ಸಿಂಗ್ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣದ ಮೇಲಿನ ವಾದ ಆಲಿಸಿದ ತ್ರಿಸದಸ್ಯ ಪೀಠವು ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಂತ್ರಸ್ಥರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಅಪರಾಧಿಗೆ ಸೂಚಿಸಿದೆ.
ಇದನ್ನೂ ಓದಿ: ಬಿ.ಎಸ್.ವೈಗೆ ಸೆಡ್ಡು ಹೊಡೆಯಲು ಇಂದಿನ ಸಭೆ ಸೀಮಿತವಾಗಿದೆ: ರಾಜ್ಯ ಕಾಂಗ್ರೆಸ್
ಯಾರು ಈ ಪ್ರಭುನಾಥ್ ಸಿಂಗ್ ?
ರಾಷ್ಟ್ರೀಯ ಜನತಾ ದಳ ಪಕ್ಷದ ಪ್ರಭಾವಿ ನಾಯಕರಾಗಿರುವ ಪ್ರಭುನಾಥ್ ಸಿಂಗ್ 12, 13 ಹಾಗೂ 14ನೇ ಲೋಕಸಭೆ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 1985 ರಿಂದ 95ರವರೆಗೆ ಬಿಹಾರದ ಸರನ್ ಜಿಲ್ಲೆಯ ಮಸ್ರಖ್ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಿಂದ 2009ರ ವರೆಗೆ ಮಹಾರಾಜ್ಗಂಜ್ ಲೋಕಸಭೆ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿದ್ದರು.
ವಿಧಾನಸಭೆ ಚುನಾವಣೆಯ ಮತದಾನದ ದಿನದಂದು ಬಿಹಾರದ ಸರನ್ ಜಿಲ್ಲೆಯ ಚಾಪ್ರಾದಲ್ಲಿ ತಮ್ಮ ವಿರುದ್ಧ ಮತ ಚಲಾಯಿಸಿದೆಂಬ ಕಾರಣಕ್ಕೆ ಪ್ರಭುನಾಥ್ ಸಿಂಗ್ ಇಬ್ಬರನ್ನು ಕೊಲೆ ಮಾಡಿದ್ದರು. ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ನಾಶಪಡಿಸುವುದಕ್ಕೆ ಆರೋಪಿ ಇನ್ನಿಲ್ಲದ ಪ್ರಯತ್ನ ನಡೆಸಿರುವುದನ್ನು ಗಮನಿಸಿರುವುದಾಗಿ ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯ ಹೇಳಿದೆ.