ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಬೇಕು. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಘಟಕ ಸ್ಥಾಪನೆ ಮಾಡಿದ್ದು ಪ್ರತಿಯೊಬ್ಬರೂ ಹಸಿ ಮತ್ತು ಒಣ ಕಸವನ್ನು ವಿಂಡಗಿಸಿ ವಾಹನಗಳಿಗೆ ನೀಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ನೀಡಿದರು.
ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ಕಳಸಾಪುರ ಗ್ರಾಪಂನಿಂದ ಭಾನುವಾರ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಗಳಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಕಲುಷಿತವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ತ್ಯಾಜ್ಯ ವಿಂಗಡಣೆ ಮತ್ತು ಸೂಕ್ತ ಸಂಗ್ರಹಣೆ-ಸಂಸ್ಕರಣೆ ವ್ಯವಸ್ಥೆಯನ್ನು ಕಲ್ಪಿಸುವುದು ಗ್ರಾಪಂಗಳ ಜವಾಬ್ದಾರಿ. ಜತೆಗೆ ಸಮುದಾಯದ ಸಹಭಾಗಿತ್ವವೂ ಗಣನೀಯ ಪಾತ್ರವಹಿಸುತ್ತದೆ. ಗ್ರಾಮದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಲ್ಪಿಸಿದ್ದು ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಘನ, ದ್ರವ ತ್ಯಾಜ್ಯವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಗ್ರಾಮೀಣ ಜನರಿಗೆ ಮನವರಿಕೆ ಮಾಡಲು ಘಟಕಗಳನ್ನು ಆರಂಭಿಸಲಾಗಿದೆ. ಇದರಿಂದ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದರು.
ಕಳಸಾಪುರ ಗ್ರಾಪಂ ಅಧ್ಯಕ್ಷ ಕೆ.ಸಿ.ಚಂದ್ರಶೇಖರ್ ಮಾತನಾಡಿ, ಪ್ರತಿ ಮನೆಯಲ್ಲೂ ಕಸ ಹಾಕುವ ಮೊದಲು ಹಸಿ, ಒಣ, ಮರು ಬಳಕೆಯಾಗುವ ಕಸ ಎಂದು ವಿಂಗಡಣೆ ಮಾಡಿಕೊಡಬೇಕು. ಪಂಚಾಯಿತಿ ಸಿಬ್ಬಂದಿ ಕಸ ಸಾಗಣೆ ವಾಹನಗಳ ಮೂಲಕ ಮನೆಗಳಿಗೆ ತೆರಳಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಿದ್ದಾರೆ ಎಂದರು.
ತಾಪಂ ಅಧಿಕಾರಿ ಎ.ಡಿ.ಪರಮೇಶ್, ಕಳಸಾಪುರ ಗ್ರಾಪಂ ಉಪಾಧ್ಯಕ್ಷೆ ಶಿವರತ್ನಾ, ಸದಸ್ಯರಾದ ರುಕ್ಮಿಣಿ, ಗೌಸ್ ಖಾನ್, ಕೆ.ಎಸ್.ವೆಂಕಟೇಶ್, ಮಂಜುಳಾ, ಶ್ವೇತಾ, ಕೆ.ಎಸ್.ಶ್ರೀಧರ್, ಕೆ.ಸಿ.ದೇವರಾಜ್, ನಾಗೇಗೌಡ, ಗೌರಮ್ಮ, ಡಿ.ಸಿ.ಯೋಗೀಶ್, ಲಕ್ಷ್ಮಮ್ಮ, ಪಿಡಿಒ ಜಗದೀಶ್ ಇದ್ದರು.