ಹಿರೇಕೆರೂರ: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ರೈತರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ರೈತರಿಗೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಬೇಡಿಕೆಗೆ ತಕ್ಕಂತೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆ, ಸಮಸ್ಯೆಗಳಾಗದಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಬೇಕು. ರಟ್ಟಿಹಳ್ಳಿ ತಾಲೂಕಿನಲ್ಲಿ ಸೋಯಾಬೀನ್ ಬೀಜಗಳಿಗೆ ಬೇಡಿಕೆ ಇದೆ. ಅಲ್ಲಿ ಅದಕ್ಕೆ ತಕ್ಕಂತೆ ದಾಸ್ತಾನು ಮಾಡಲಾಗಿದೆ. ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಬಿತ್ತನೆಗಾಗಿ 1400 ಕ್ವಿಂಟಾಲ್ ವಿವಿಧ 13 ತಳಿಗಳ ಮೆಕ್ಕೆಜೋಳ ಬೀಜ ಪೂರೈಕೆಗೆ ಕಂಪನಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇಲ್ಲಿಯವರೆಗೆ 200 ಕ್ವಿಂಟಾಲ್ ಶೇಂಗಾ, 50 ಕ್ವಿಂಟಾಲ್ ಸೋಯಾಬೀನ್, 10ರಿಂದ 15 ಕ್ವಿಂಟಾಲ್ ಹೈಬ್ರಿಡ್ ಜೋಳ, 3 ಕ್ವಿಂಟಾಲ್ ತೊಗರಿ, 5 ಕ್ವಿಂಟಾಲ್ ನವಣೆ ಬೀಜ ದಾಸ್ತಾನು ಮಾಡಲಾಗಿದೆ. ಹಿರೇಕೆರೂರ, ಚಿಕ್ಕೇರೂರ, ಹಂಸಭಾವಿ, ಕೋಡ, ರಟ್ಟಿಹಳ್ಳಿ, ಮಾಸೂರು, ತಡಕನಹಳ್ಳಿ, ಹಳ್ಳೂರು ಗ್ರಾಮ ಸೇರಿ 8 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ರೈತರು ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಡಳಿತ ಅಧ್ಯಕ್ಷ ಜಿ. ಶಿವನಗೌಡ್ರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ, ರಾಣೆಬೆನ್ನೂರು ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್., ತಾಲೂಕು ಸಹಾಯಕ ನಿರ್ದೇಶಕ ಎಂ.ವಿ. ಮಂಜುನಾಥ, ಶಿಲ್ಪಾ ಗೌಡರ ಹಾಗೂ ಸಿಬ್ಬಂದಿ ಇದ್ದರು.