ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ, “ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ನಕಲಿ. ಅವರು ಹಾಗೆ ಹೇಳಲು ಸಾದ್ಯವಿಲ್ಲ. ಒಂದು ವೇಳೆ ಪಕ್ಷ ಹೇಳಿದರೆ ನಾನು ರಾಜೀನಾಮೆ ನೀಡಲು ಸಿದ್ಧ. ಸಂಘಟನೆ ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಪಕ್ಷ ಹೇಳಿದ ಹಾಗೆ ಇದುವರೆಗೆ ನಡೆದುಕೊಂಡಿದ್ದೇನೆ. ಸಂಘಟನೆಯಲ್ಲಿ ಯುವಕರಿಗೆ ಒತ್ತು ನೀಡುತ್ತಿದ್ದಾರೆ. ಸಚಿವ ಸ್ಥಾನ ಹೋದರೆ ಗೂಟ ಹೋದಂತೆ” ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ರಾಜಕಾರಣದಲ್ಲಿ ನಾನು ಗೂಟ ಹೊಡೆದುಕೊಂಡು ಇಲ್ಲ. ಮಂತ್ರಿಸ್ಥಾನ ಹೋದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಧಿಕಾರ ಹೋದರೆ ಗೂಟ ಹೋದಂತೆ. ಆದರೆ ಪಕ್ಷದ ರಾಜ್ಯಾಧ್ಯಕ್ಷರು ಮಾತನಾಡಿದ್ದಾರೆ ಎಂಬ ಆಡಿಯೋದಲ್ಲಿ ಯಾವುದೇ ಹುರುಳಿಲ್ಲ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಹೇಳಿದರು.
ಇದನ್ನೂ ಓದಿ: ಪಾರ್ಟಿಗೆ ಆತ್ಮ ಯಡಿಯೂರಪ್ಪ; ಈಶ್ವರಪ್ಪ, ಶೆಟ್ಟರ್ ಕಣ್ಣುಗಳಂತೆ: ಕಟೀಲ್
ವೈರಲ್ ಆಗಿರುವ ಆಡಿಯೋ ನನ್ನದಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಅವರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ, ನನ್ನ ದನಿಯನ್ನು ಅನುಕರಣೆ ಮಾಡಲಾಗಿದೆ ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ. ಆದರೆ ರಾಜ್ಯದ ಜನರಿಗೆ ಈ ವಿಷಯದಲ್ಲಿ ಸ್ಪಷ್ಟತೆ ಸಿಗಲು ಆಡಿಯೋ ಬಗ್ಗೆ ತನಿಖೆ ನಡೆಸುವುದು ಸೂಕ್ತ ಎಂದರು.
ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷನಾಗುವಂತೆ ಹಿರಿಯರು ಸೂಚನೆ ನೀಡಿದರು. ನಾನು ಅಧಿಕಾರ ಬಿಟ್ಟು ಸಂಘಟನೆಗೆ ಮರಳಿದೆ. ಅದಕ್ಕೂ ಮುನ್ನ ರೇಷ್ಮೆ ಮಂಡಳಿ ಅಧ್ಯಕ್ಷನಾಗಿದ್ದಾಗ ಕನಕಪುರದಲ್ಲಿ ಲೋಕಸಭಾ ಚುನಾವಣೆಗೆ ದೇವೇಗೌಡರ ವಿರುದ್ಧ ಸ್ಪರ್ಧಿಸುವಂತೆ ಪಕ್ಷ ಆದೇಶ ನೀಡಿತ್ತು. ನಾನು ಆದೇಶ ಪಾಲಿಸಿದೆ ಎಂದು ವಿವರಿಸಿದ ಈಶ್ವರಪ್ಪ, “ಒಂದು ವೇಳೆ ಪಕ್ಷ ಸೂಚನೆ ನೀಡಿದರೆ ನಾನು ರಾಜೀನಾಮೆ ನೀಡಲು ಸಿದ್ಧ. ಈಗ ಸಂಘಟನೆಯಲ್ಲಿ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ” ಎಂದರು.
ಸಂಸತ್ ಅಧಿವೇಶನದಲ್ಲಿ 30 ಮಸೂದೆಗಳು; ಯಾವುದೇ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಮೋದಿ