ಹೊಸಪೇಟೆ: ಸಮಾನ ಕೆಲಸಕ್ಕೆ ಒಂದೇ ವೇತನ ಜಾರಿ ಮಾಡಲು ಒತ್ತಾಯಿಸಿ ಸೆಂಟರ್ ಆಪ್ ಇಂಡಿಯಾ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಮಿಕರು ಶನಿವಾರ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿದರು.
ಕಡಿಮೆ ವೇತನದಿಂದ ಕುಟುಂಬ ನಡೆಸುವುದು ಕಷ್ಟ
ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ 17ಕ್ಕೂ ಹೆಚ್ಚಿನ ಕಾರ್ಮಿಕರು 8 ರಿಂದ 9 ವರ್ಷಗಳಿಂದ ಹೊರಗುತ್ತಿಗೆ ಸಫಾಯಿ, ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ. ಸದ್ಯ ಮೂರು ಸಾವಿರ ರೂ.ಯಿಂದ ಏಳು ಸಾವಿರ ರೂ. ವರೆಗೆ ವೇತನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿಭಾಯಿಸುವುದು ಕಷ್ಟಕರವಾಗಿದೆ ಎಂದು ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರು ವಾರದ ರಜೆ, ರಾಷ್ಟ್ರೀಯ ಹಬ್ಬದ ರಜೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರ ಕಾಯ್ದೆ ನಿಯಮದಂತೆ ಇಎಸ್ಐ ಮತ್ತು ಗ್ರೂಪ್ ಇನ್ಶುರೆನ್ಸ್ ಸೌಲಭ್ಯ ಒದಗಿಸಬೇಕು. ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಯನ್ನು ಜಾರಿ ಮಾಡಬೇಕು. ಪಿಎಫ್ ವಂತಿಗೆ ಹಣ ಸಹ ಪಾವತಿಸದೆ ವಂಚನೆ ಮಾಡಲಾಗುತ್ತಿದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗುತ್ತಿಲ್ಲ. ಗುತ್ತಿಗೆದಾರರನ್ನು ಪ್ರಶ್ನೆ ಮಾಡಿದರೆ ಕೆಲಸದಿಮದ ತೆಗೆದು ಹಾಕಲಾಗುತ್ತಿದೆ. ನಂತರ ಬೇರೆಯವರನ್ನು ಕೆಲಸಕ್ಕೆ ಸೇರಿಸಲಾಗುತ್ತಿದೆ. 8 ವರ್ಷದಿಂದ ವೇತನದಲ್ಲಿ ಕಡಿತಗೊಳಿಸಿದ ಹಣವನ್ನು ಕಾರ್ಮಿಕರಿಗೆ ವಾಪಸ್ ನೀಡಬೇಕು. ಕೂಡಲೇ ಕೆಲಸಕ್ಕೆ ತಗೆದು ಹಾಕಿರುವವರನ್ನು ಮರು ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು ಪ್ರಮುಖರಾದ ಎನ್.ಯಲ್ಲಾಲಿಂಗ, ಎಂ.ಗೋಪಾಲ್, ಕೆ.ನಾಗರತ್ನ, ಜೆ.ಪ್ರಕಾಶ್, ಜೆ.ಶಕುಂತಲ ಇತರರಿದ್ದರು.