More

    ಇಂಜಿನಿಯರ್‌ಗಳು ಕ್ಷಮತೆಯಿಂದ ಕೆಲಸ ಮಾಡಿ: ಡಿಸಿ ಸೆಲ್ವಮಣಿ ಸಲಹೆ

    ಶಿವಮೊಗ್ಗ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ವಿಶ್ವ ಕಂಡ ಶ್ರೇಷ್ಠ ಇಂಜಿನಿಯರ್. ಕೆಆರ್‌ಎಸ್ ಅಣೆಕಟ್ಟು, ತುಂಗಾ-ಭದ್ರಾ ಅಣೆಕಟ್ಟು, ಕಬ್ಬಿಣ ಮತ್ತು ಉಕ್ಕಿನ ಕಾರ್ಖನೆಗಳ ನಿರ್ಮಾಣಕ್ಕೆ ಅವರ ದೂರದೃಷ್ಟಿಯೇ ಕಾರಣ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಬಣ್ಣಿಸಿದರು.
    ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಂಡ್ಯ ಮತ್ತು ಮೈಸೂರಿನ ಜನತೆ ಇಂದಿಗೂ ತಮ್ಮ ಮನೆಗಳಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರ ಇಟ್ಟು ಗೌರವಿಸುತ್ತಾರೆ ಎಂದರು.
    ರಸ್ತೆ, ಅಣೆಕಟ್ಟು, ವಿದ್ಯುತ್, ಮನೆಗಳ ನಿರ್ಮಾಣ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಇಂಜಿನಿಯರ್‌ಗಳ ಕೊಡುಗೆ ಅಪಾರ. ದೇಶದಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಈಗಿನ ಇಂಜಿನಿಯರ್‌ಗಳು ತರಾತುರಿಯಲ್ಲಿ ಕೆಲಸ ಮಾಡದೆ ವಿಶ್ವೇಶ್ವರಯ್ಯ ಅವರಂತೆ ಕ್ಷಮತೆಯಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು. ಇಂಜಿನಿಯರ್‌ಗಳ ದಿನಾಚರಣೆ ಕೇವಲ ಸಿವಿಲ್ ಇಂಜಿನಿಯರ್‌ಗಳಿಗೆ ಸೀಮಿತವಾಗಿಲ್ಲ. ತಂತ್ರಜ್ಞಾನ, ಮ್ಯೆಕಾನಿಕಲ್ ಮುಂತಾದ ಕ್ಷೇತ್ರದ ಪ್ರತಿಯೊಬ್ಬ ಅಭಿಯಂತರಿಗೆ ಈ ದಿನ ಸಮರ್ಪಣೆಯಾಗುತ್ತದೆ ಎಂದರು.
    ಎಡಿಸಿ ಡಾ. ನಾಗೇಂದ್ರ ಎಫ್ ಹೊನ್ನಳ್ಳಿ ಮಾತನಾಡಿ, ವಿಶ್ವೇಶ್ವರಯ್ಯ ನಿರ್ಮಿಸಿದ ಡ್ಯಾಂ, ಕಟ್ಟಡಗಳಲ್ಲಿ ಅವರ ಕಾರ್ಯಕ್ಷಮತೆ, ದೃಢ ನಿರ್ಧಾರ, ಸಂಕಲ್ಪಗಳು ಜಗತ್ತಿಗೆ ತಿಳಿದಿದೆ. ಹಾಗಾಗಿ ಪ್ರತಿಯೊಬ್ಬ ಇಂಜಿನಿಯರ್‌ಗಳು ಅವರ ಕಾರ್ಯವೈಖರಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.
    ಭದ್ರಾವತಿ ನಗರಸಭೆ ಪೌರಯುಕ್ತ ಮನುಕುಮಾರ್, ಸಾಗರ ನಗರಸಭೆ ಪೌರಯುಕ್ತ ರಾಜು ಬಣಕಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣನವರ್, ಅಧೀಕ್ಷಕ ಅಭಿಯಂತರಾದ ನಟೇಶ್, ಎಲ್.ಮೋಹನ್‌ಕುಮಾರ್, ಕಾನೂನು ಸಲಹೆಗಾರ ರವೀಂದ್ರನಾಥ್, ಕಾರ್ಯಪಾಲ ಅಭಿಯಂತ ನದಾಫ್ ವಹೀದಾ ಬೇಗಂ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts