More

    97 ಗ್ರಾಪಂಗಳಿಗೆ ಓರ್ವ ಇಂಜಿನಿಯರ್: ಬೈಂದೂರು ಪಂಚಾಯತ್‌ರಾಜ್ ವಿಭಾಗಕ್ಕೆ ಇಂಜಿನಿಯರ್‌ಗಳ ಕೊರತೆ

    ವಿಜಯವಾಣಿ ಸುದ್ದಿಜಾಲ ಬೈಂದೂರು
    ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ನೂರೆಂಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅನುಷ್ಠಾನಕ್ಕೆ ಹತ್ತಾರು ಅಧಿಕಾರಿಗಳನ್ನು ನಿಯೋಜಿಸುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸುತ್ತದೆ. ಆದರೆ ಬೈಂದೂರು ತಾಲೂಕಿನಲ್ಲಿ ಪಂಚಾಯತ್‌ರಾಜ್ ಯೋಜನೆ ಕಾಮಗಾರಿ ನಿರ್ವಹಿಸಬೇಕಾದ ಬಹುದೊಡ್ಡ ಇಲಾಖೆಯಲ್ಲಿ ಒಬ್ಬರೇ ಒಬ್ಬರು ಇಂಜಿನಿಯರ್‌ಗಳಿಲ್ಲ. ಇದರ ಪರಿಣಾಮ ಸಮೃದ್ಧ ಬೈಂದೂರಿನ ಸಮಗ್ರ ಅಭಿವೃದ್ಧಿ ಕುಂಠಿತಗೊಳ್ಳುವಂತಾಗಿದೆ.

    ಇಂಜಿನಿಯರ್‌ಗಳ ಕೊರತೆ-ಹುದ್ದೆಗಳು ಖಾಲಿ

    ಜಿಪಂ ಹಾಗೂ ತಾಪಂ ಹಾಗೂ ಗ್ರಾಪಂ ಮೂಲಕ ಸರ್ಕಾರ ರಸ್ತೆ, ಸೇತುವೆ, ನೀರಾವರಿ ಕಾಮಗಾರಿಗಾಗಿ ಅನುದಾನ ಮೀಸಲಿಡುತ್ತದೆ. ಇದರ ನಿರ್ವಹಣೆಯನ್ನು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ನಿರ್ವಹಿಸಬೇಕಿದೆ. ಇದರ ಜತೆಗೆ ಶಾಸಕರ ಅನುದಾನ, ಸಂಸದರ ಯೋಜನೆಗಳೂ ಕೂಡ ಸೇರಿಕೊಳ್ಳುತ್ತವೆ. ಬೈಂದೂರು ಮತ್ತು ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಈ ಹಿಂದೆ 99 ಗ್ರಾಮಗಳಿದ್ದು, ಅವುಗಳಲ್ಲಿ ಬೆಳ್ವೆ, ಮಡಾಮಕ್ಕಿ, ಹೆಬ್ರಿ ವ್ಯಾಪ್ತಿಗೆ ಸೇರ್ಪಡೆಯಾದ ಕಾರಣ ಪ್ರಸ್ತುತ 97 ಗ್ರಾಪಂಗಳಿವೆ. ಆದರೆ ಈ ಎಲ್ಲ ಪಂಚಾಯಿತಿಗಳಿಗೆ ಕಾಮಗಾರಿ ನಿರ್ವಹಣೆಗೆ ಇಲಾಖೆಯಲ್ಲಿ ಇಂಜಿನಿಯರ್‌ಗಳಿಲ್ಲ.

    ಕಾರ್ಕಳ, ಉಡುಪಿಯಿಂದ ಹೆಚ್ಚುವರಿ ಇಂಜಿನಿಯರ್‌ಗಳನ್ನು ಅಪರೂಪಕ್ಕೆ ಕರೆಸಲಾಗುತ್ತದೆ. ಇದರಿಂದ ಎಲ್ಲೋ ಒಂದಿಷ್ಟು ಕಾಮಗಾರಿ ತೆವಳುತ್ತಾ ಸಾಗುತ್ತಿವೆ. ಒಟ್ಟಾರೆ ಗ್ರಾಪಂಗಳು ಕ್ರಿಯಾಯೋಜನೆ ಮಾಡಿಕೊಂಡು ಅಧಿಕಾರಿಗಳಿಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾಗಿದೆ.

    ಪ್ರಭಾರಿ ಇಂಜಿನಿಯರ್ ಕೂಡ ಜನರಿಗೆ ಸಿಗುತ್ತಿಲ್ಲ

    ಈಗಿರುವ ಪ್ರಭಾರಿ ಇಂಜಿನಿಯರ್ ಕೂಡ ಜನರಿಗೆ ಸಿಗುತ್ತಿಲ್ಲ. ಬೈಂದೂರು ತಾಲೂಕು ಅಭಿವೃದ್ಧಿಗೆ ಮತ್ತು ಕಾಮಗಾರಿಗಳ ಅನುದಾನಕ್ಕೆ ಪಂಚಾಯತ್‌ರಾಜ್ ಇಲಾಖೆ ಬಹುಮುಖ್ಯವಾಗಿದ್ದು ಈ ಇಲಾಖೆಯ ಸಿಬ್ಬಂದಿಗಳಿಲ್ಲದಿದ್ದರೆ ಹೇಗೆ? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಕಾಮಗಾರಿಗಳ ಸಮರ್ಪಕ ನಿರ್ವಹಣೆ ಕೊರತೆಯಿಂದ ಕಳಪೆ ಕಾಮಗಾರಿ ಮೂಲಕ ಸರ್ಕಾರದ ಅನುದಾನ ಗುತ್ತಿಗೆದಾರರ ಪಾಲಾಗುವ ಆತಂಕಗಳಿವೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಬೈಂದೂರು ಪಂಚಾಯತ್‌ರಾಜ್ ಇಲಾಖೆಗೆ ಶೀಘ್ರ ಕಾಯಂ ಇಂಜಿನಿಯರ್‌ಗಳನ್ನು ನೇಮಕ ಮಾಡಬೇಕಿದೆ.

    ತಾಂತ್ರಿಕ ಮಂಜೂರಾತಿಗೆ ಸಂಕಷ್ಟ

    ಸರ್ಕಾರಿ ಯೋಜನೆಗಳಿಗೆ ಕ್ರಿಯಾಯೋಜನೆ ರೂಪಿಸುವ ಮೊದಲು ಇಂಜಿನಿಯರ್ ಸ್ಥಳಕ್ಕಾಗಮಿಸಿ ಎಸ್ಟಿಮೇಟ್ ಮಾಡಿ ತಾಂತ್ರಿಕ ಮಂಜೂರಾತಿ ನೀಡಬೇಕು. ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಆರಂಭವಾಗಿ ಮುಗಿಯುವವರೆಗೆ ಪ್ರತಿ ಹಂತದಲ್ಲೂ ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿ ಮುಗಿದ ಬಳಿಕ ಇಂಜಿನಿಯರ್ ವರದಿ ನೀಡಿದ ಬಳಿಕ ಬಿಲ್ ಮಂಜೂರಾಗುತ್ತದೆ. ಆದರೆ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಬೈಂದೂರು ತಾಲೂಕಿನಲ್ಲಿ ತಾಂತ್ರಿಕ ಮಂಜೂರಾಗಿ ನೀಡಲು ಅಧಿಕಾರಿಗಳಿಲ್ಲ. ಓರ್ವ ತಾತ್ಕಾಲಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಪ್ರಭಾವವಿದ್ದವರಿಗೆ ಮಾತ್ರ ಲಭ್ಯವಿರುವಂತಾಗಿದೆ.

    ಬಾಕಿ ಉಳಿದಿವೆ ಕಾಮಗಾರಿಗಳು

    ಬೈಂದೂರು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಈ ಹಿಂದೆ ನಾಲ್ವರು ಇಂಜಿನಿಯರ್‌ಗಳಿದ್ದರು. ಪ್ರಸ್ತುತ ಈ ಹುದ್ದೆಗಳು ಖಾಲಿಯಿವೆ. ಒಂದು ಜೂನಿಯರ್ ಇಂಜಿನಿಯರಿಂಗ್ ಹುದ್ದೆಯಿದೆ. ಪ್ರಸ್ತುತ ಜಲಜೀವನ್ ಮಿಷನ್ ಯೋಜನೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ 585 ಕೋಟಿ ರೂ. ಅನುದಾನದ ಕಾಮಗಾರಿ ನಡೆಯುತ್ತಿದೆ. ಬೈಂದೂರು ಪಟ್ಟಣ ಪಂಚಾಯಿತಿ ಹಾಗೂ 15 ಗ್ರಾಮ ಪಂಚಾಯಿತಿಗಳಿವೆ. ಗ್ರಾಪಂ ವ್ಯಾಪ್ತಿಯ ರಸ್ತೆ, ಸೇತುವೆ, ಬಾವಿ ನಿರ್ಮಾಣ ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳು ಕೂಡ ಇಂಜಿನಿಯರಿಂಗ್ ಇಲಾಖೆ ಸಿಬ್ಬಂದಿ ಸಮಸ್ಯೆಯಿಂದ ಬಾಕಿ ಉಳಿಯುವಂತಾಗಿದೆ.

    ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಕುಂದಾಪುರ ವಿಭಾಗ ಬಹುದೊಡ್ಡ ವ್ಯಾಪ್ತಿ ಹೊಂದಿದೆ. ಕಾಮಗಾರಿಗಳ ಪರಿಶೀಲನೆಗೆ ಇರುವ ನಾಲ್ಕು ಹುದ್ದೆಗಳು ಖಾಲಿ ಇವೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಕಳ ಮತ್ತು ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುವ ಇಂಜಿನಿಯರ್‌ಗಳನ್ನು ಕುಂದಾಪುರ ಉಪವಿಭಾಗಕ್ಕೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಜಲಜೀವನ್ ಯೋಜನೆ ಪ್ರಗತಿಯಲ್ಲಿದೆ. ಸಿಬ್ಬಂದಿ ಕೊರತೆಯಿಂದ ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಲು ಸಮಸ್ಯೆಯಾಗುತ್ತದೆ. ಈ ಕುರಿತು ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ.
    -ರಾಜ್‌ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts